ದಕ್ಷಿಣ ಕನ್ನಡ : ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಇದೀಗ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ನಡುವೆ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಇದ್ದ ನಿರ್ಬಂಧಗಳನ್ನು ಕೂಡಾ ತೆಗೆದು ಹಾಕಲಾಗಿದೆ. ಹೀಗಾಗಿ ರಾಜ್ಯದ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಅನ್ನಪ್ರಸಾದ ಹಾಗೂ ಪ್ರಮುಖ ಸೇವೆಗಳಿಗೆ ಚಾಲನೆ ನೀಡಲಾಗಿದೆ.
ಅದರಂತೆ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ಸೇವೆಗಳು ಪ್ರಾರಂಭಗೊಂಡಿದೆ. ಜೊತೆಗೆ ಅನ್ನಪ್ರಸಾದ ವಿತರಣೆಯೂ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಆದರೆ ಕುಕ್ಕೆಯ ಪ್ರಧಾನ ಸೇವೆಗಳಾದ ಸರ್ಪ ಸಂಸ್ಕಾರ, ಅಶ್ಲೇಷ ಬಲಿ, ನಾಗ ಪ್ರತಿಷ್ಟೆ ಹಾಗೂ ಮಹಾಭಿಷೇಕ ಸೇವೆಗಳು ಜುಲೈ 29 ರಿಂದ ಪ್ರಾರಂಭಗೊಳ್ಳಲಿದೆ.
ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ, ಅಪರಾಹ್ನ 3.30ರಿಂದ ರಾತ್ರಿ 8.30ರ ತನಕ ಭಕ್ತರಿಗೆ ಶ್ರೀ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ತುಲಾಭಾರ, ಶೇಷ ಸೇವೆ, ಪ್ರಾರ್ಥನೆ, ಮಧ್ಯಾಹ್ನದ ಮಹಾಪೂಜೆ, ಪವಮಾನಯುಕ್ತ ಪಂಚಾಮೃತಾಭಿಷೇಕ, ಕಲಶಪೂಜಾಯುಕ್ತ ಪಂಚಾಮೃತಾಭಿಷೇಕ, ಚವಲ ಹರಕೆ, ಹಣ್ಣುಕಾಯಿ ಸಮರ್ಪಣೆ, ವಾಹನ ಪೂಜೆ, ಹರಿವಾಣ ನೈವೇದ್ಯ, ಚಿತ್ರಾನ್ನ ಸಮರ್ಪಣೆ, ಹಾಲು ಪಾಯಸ, ಸಹಸ್ರನಾಮಾರ್ಚನೆ, ಅಷ್ಟೋತ್ತರ ಅರ್ಚನೆ, ಮೃಷ್ಠಾನ್ನ ಸಂತರ್ಪಣೆ, ಸಂತರ್ಪಣೆ , ನಂದಾದೀಪ, ಮಂಗಳಾರತಿ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಕಾರ್ತಿಕ ಪೂಜೆ ಸೇವೆಗಳು ಆರಂಭಗೊಂಡಿವೆ. ಜೊತೆಗೆ ಲಡ್ಡು, ಪಂಚ ಕಜ್ಜಾಯ ಪ್ರಸಾದ, ತೀರ್ಥ ಬಾಟ್ಲಿ ವಿತರಣೆಗೂ ಚಾಲನೆ ಸಿಕ್ಕಿದೆ.
ಈ ನಡುವೆ ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ. ಸಾವಿನ ಸಂಖ್ಯೆಗೂ ಕಡಿವಾಣ ಬಿದ್ದಿಲ್ಲ. ಇದೀಗ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಮತ್ತೆ ಜನಜಂಗುಳಿ ಏರ್ಪಡುವುದರಿಂದ ಕರಾವಳಿ ಜಿಲ್ಲೆಗೆ ಆತಂಕ ಕಟ್ಟಿಟ್ಟ ಬುತ್ತಿ.
Discussion about this post