ಬೆಂಗಳೂರು : ಚಲನಚಿತ್ರ ನಿರ್ಮಾಪಕ, ಕನ್ನಡ ಹೋರಾಟಗಾರ ಸಾ.ರಾ. ಗೋವಿಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಜಾಜಿನಗರದಲ್ಲಿ ನಡೆದ ಸಮಾರಂಭದಲ್ಲಿ ಡಿಕೆಶಿ ಸಮ್ಮುಖದಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ವೇಳೆ ಸಾರಾ ಗೋವಿಂದು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಸಾ.ರಾ.ಗೋವಿಂದು ಅವರನ್ನು ಕಳೆದ 40 ವರ್ಷಗಳಿಂದ ನಾನು ಬಲ್ಲೆ. ಜನರ ಸೇವೆಗಾಗಿ ತುಡಿಯುವ ಅವರ ಸಾರ್ವಜನಿಕ ಜೀವನವನ್ನು ಕಾಂಗ್ರೆಸ್ ಪಕ್ಷ ಶ್ಲಾಘಿಸುತ್ತದೆ. ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳು ಸಿಗಲಿದೆ ಎಂದರು.
![sara govindu cong](https://torrentspree.com/wp-content/uploads/2021/07/sara-govindu-cong.jpg)
ಇನ್ನು ಇದೇ ವೇಳೆ ಸಾರಾ ಗೋವಿಂದು ಜನ್ಮದಿನದ ಪ್ರಯುಕ್ತ ರಾಜಾಜಿನಗರದಲ್ಲಿ ಕಿಟ್ ವಿತರಣೆ ಕಾರ್ಯಕ್ರಮವೂ ನಡೆಯಿತು. ಸಾರಾ ಅವರ ಈ ಕಾರ್ಯವನ್ನು ಶ್ಲಾಘಿಸಿದ ಡಿಕೆ ಶಿವಕುಮಾರ್, ಸಾರಾ ಗೋವಿಂದು ಮೊದಲಿನಿಂದಲೂ ಜನಪರವಾದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕೊರೋನಾ ಸಂಕಷ್ಟದಲ್ಲೂ ಸಾವಿರಾರು ಮಂದಿ ಆಹಾರದ ಕಿಟ್ ವಿತರಿಸಿದ್ದಾರೆ ಅಂದರು.
![sara govindu cong2](https://torrentspree.com/wp-content/uploads/2021/07/sara-govindu-cong2.jpg)
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಟ್ ವಿತರಣೆಗೆ ಚಾಲನೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾರಾ ಗೋವಿಂದ ನನ್ನ ಪರಿಚಯ ಮೂರು ದಶಕಗಳನ್ನು ಮೀರಿದ್ದು, ಅವರು ನಮ್ಮ ಚಾಮರಾಜನಗರ ಕಡೆಯವರಾಗಿದ್ದಾರೆ ಅಂದರು. ಇನ್ನು ಸಿದ್ದರಾಮಯ್ಯ ಮಾತು ಮುಂದುವರಿಸುತ್ತಿದ್ದಂತೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಮಳೆ ಶುಭ ಸೂಚಕ ಎಂದು ಸಿದ್ದರಾಮಯ್ಯ ಭಾಷಣ ಮೊಟಕುಗೊಳಿಸಿದರು.
![sara govindu cong3](https://torrentspree.com/wp-content/uploads/2021/07/sara-govindu-cong3.jpg)
Discussion about this post