ಮಂಗಳೂರು : ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪ್ರದೇಶಗಳು ಕೋಮು ಸೂಕ್ಷ್ಮದ ಕಾರಣಕ್ಕೆ ಸುದ್ದಿಯಲ್ಲಿರುತ್ತಿತ್ತು. ಆದರೆ ಕಾಲ ಉರುಳಿದಂತೆ ಅಪರಾಧಗಳ ಸ್ವರೂಪವೂ ಬದಲಾಗಿದೆ. ಇದೀಗ ಕರಾವಳಿ ಕೋಮುಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಬದಲಾಗಿ ನೈತಿಕ ಪೊಲೀಸ್ ಗಿರಿ, ದನ ಕಳ್ಳತನದ ಕಾಟ ಶುರುವಾಗಿದೆ. ಮತ್ತೊಂದು ಕಡೆ ಮಾದಕ ವಸ್ತುಗಳ ಜಾಲ ಬೆಳೆಯುತ್ತಿದೆ. ಉಗ್ರರ ಚಟುವಟಿಕೆಗಳ ತಾಣವಾಗುತ್ತಿದೆ ಹೀಗೆ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ.
ಇವುಗಳನ್ನು ಮಟ್ಟ ಹಾಕಬೇಕಾದರೆ ಕೇವಲ ಮನುಷ್ಯರಿಂದ ಸಾಧ್ಯವಿಲ್ಲ. ಬದಲಾಗಿ ಶ್ವಾನಗಳ ಸಹಕಾರವೂ ಸಾಕಷ್ಟು ಮುಖ್ಯ. ಈ ಹಿಂದೆ ಮಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಸ್ಫೋಟಕ ಪತ್ತೆ ಕಾರ್ಯಕ್ಕಾಗಿ ಸುಧಾ ಎಂಬ ಶ್ವಾನ ಕಾರ್ಯ ನಿರ್ವಹಿಸುತ್ತಿತ್ತು. ಕ್ಯಾನ್ಸರ್ ಕಾರಣದಿಂದ ಅದು ಮೃತಪಟ್ಟಿತ್ತು.
ಇದೀಗ ಸುಧಾ ಕಾರ್ಯನಿರ್ವಹಿಸುತ್ತಿದ್ದ ಜಾಗಕ್ಕೆ ರಾಣಿ ಸೇರ್ಪಡೆಗೊಂಡಿದೆ. ಮುಂಬರುವ ಹಬ್ಬದ ದಿನಗಳಲ್ಲಿ ವಿಧ್ವಂಸಕ ಕೃತ್ಯಗಳು ನಡೆಯಬಹುದು ಅನ್ನುವ ಭೀತಿ ಹಾಗೂ ಗುಪ್ತಚರದಳದ ಮಾಹಿತಿ ಹಿನ್ನಲೆಯಲ್ಲಿ ರಾಣಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಬೆಂಗಳೂರಿನಲ್ಲಿ ತರಬೇತಿಯನ್ನು ಮುಗಿಸಿರುವ ರಾಣಿ ಮಂಗಳೂರು ಸಿಟಿ ಆರ್ಮ್ಡ್ ರಿಸರ್ವ್ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲಿದೆ. ಮನೋಜ್ ಶೆಟ್ಟಿ ಹಾಗೂ ನಾಗೇಂದ್ರ ಅವರು ರಾಣಿಯ ಉಸ್ತುವಾರಿ ಹೊಣೆ ಹೊತ್ತಿದ್ದಾರೆ.
![rani police](https://torrentspree.com/wp-content/uploads/2021/09/rani-police.jpg)
Discussion about this post