ಕರ್ನಾಟಕದ ಹಲವು ಭಾಗಗಳು ನೆರೆಯಿಂದ ಮುಳುಗಿ ಹೋಗಿದೆ. ಜನ ಸಂಕಷ್ಟದಲ್ಲಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಬಿಜೆಪಿ ಸರ್ಕಾರ ಅಷ್ಟು ಕೋಟಿ ಬಿಡುಗಡೆ ಇಷ್ಟು ಕೋಟಿ ಬಿಡುಗಡೆ ಅನ್ನುತ್ತಿದೆ.
ಮತ್ತೊಂದು ಕಡೆ ಬೊಕ್ಕಸ ಕೂಡಾ ಖಾಲಿಯಾಗಿದೆ ಅನ್ನುವ ಸುದ್ದಿಗಳು ಬರುತ್ತಿದೆ. ಈ ನಡುವೆ ಯಾರು ಏನು ಬೇಕಾದ್ರೂ ಆಗ್ಲಿ ಎಂದು ಮಾಜಿ ಸಿಎಂ, ಬೃಹತ್ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ವಿದೇಶಕ್ಕೆ ಪ್ರವಾಸ ಹೊರಟಿದ್ದಾರೆ. ಹಾಗಂತ ಅವರೊಬ್ಬರೇ ಹೋಗಿದ್ರೆ ಸಹಿಸಿಕೊಳ್ಳಬಹುದಾಗಿತ್ತು. ಜೊತೆಗೆ ಅವರ ಪತ್ನಿ ಶಿಲ್ಪಾ ಕೂಡಾ ಹೋಗುತ್ತಿದ್ದಾರೆ. ಅಯ್ಯೋ ಹೋಗ್ಲಿ ಬಿಡಿ ಅವರ ವೈಯುಕ್ತಿಕ ವಿಚಾರ ತಾನೇ ಅಂತ ಸುಮ್ನಿರಬಹುದಿತ್ತು. ಆದರೆ ಅವರು ಅವರ ಪ್ರವಾಸ ಹೋಗುತ್ತಿರುವುದು ಸರ್ಕಾರಿ ದುಡ್ಡಿನಲ್ಲಿ.
ಸಚಿವ ದಂಪತಿ ಮಾತ್ರವಲ್ಲದೆ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅವರ ಪತ್ನಿಯನ್ನು ಒಳಗೊಂಡಂತೆ ಒಟ್ಟು 9 ಜನರ ತಂಡಕ್ಕೆ ವಿದೇಶಿ ಪ್ರವಾಸದ ಯೋಜನೆ ಸಿದ್ಧವಾಗಿದೆ. ಒಟ್ಟು 10 ದಿನದ ಪ್ರವಾಸಕ್ಕೆ ಸರ್ಕಾರಿ ಹಣವನ್ನೇ ಬಳಸಿಕೊಳ್ಳಲಾಗುತ್ತಿದೆಯಂತೆ.
ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅವರ ಪತ್ನಿ ಶೀಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶಿ ಗೌರವ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ, ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಧವಳೇಶ್ವರ್, ಎಂಎಸ್ಐಎಲ್ ಎಂಡಿ ಪ್ರಕಾಶ್, ಅವರ ಪತ್ನಿ, ಎಂಎಸ್ಐಎಲ್ ಅಧಿಕಾರಿ ಚಂದ್ರಪ್ಪ, ಹಾಗೂ ಪತ್ನಿ ವಿದೇಶ ಪ್ರವಾಸದ ಲಿಸ್ಟ್ ನಲ್ಲಿ ಇದ್ದಾರೆ.
ಸಚಿವರು ಮತ್ತು ಅಧಿಕಾರಿಗಳ ಪ್ರವಾಸದ ವೆಚ್ಚವನ್ನು ರಾಜ್ಯದ ಬೊಕ್ಕಸದಿಂದ ಭರಿಸಲಾಗುತ್ತಿದೆ. ಅವರ ಪತ್ನಿಯರ ಖರ್ಚು ಅವರೇ ವೈಯುಕ್ತಿಕವಾಗಿ ನೋಡಿಕೊಳ್ಳಲಿದ್ದಾರೆ ಅನ್ನುವುದು ಇದೀಗ ಬಂದಿರುವ ಸಮರ್ಥನೆ.
ಹೋಗುತ್ತಿರುವುದು ಸೆಮಿನಾರ್ ನಲ್ಲಿ ಪಾಲ್ಗೊಳ್ಳುವುದಕ್ಕೆ, ಅಲ್ಲಿ ಸಚಿವರ ಪತ್ನಿ, ಅಧಿಕಾರಿಗಳ ಪತ್ನಿಯರಿಗೆ ಏನು ಕೆಲಸ ಅನ್ನುವುದು ಈಗಿರುವ ಪ್ರಶ್ನೆ.
ಇನ್ನು ಪತ್ನಿಯಂದಿರ ವೆಚ್ಚವನ್ನು ವೈಯುಕ್ತಿಕವಾಗಿ ಭರಿಸುತ್ತಾರೆ ಅನ್ನುವ ಸಮರ್ಥನೆ ಅದೆಷ್ಟು ಹಾಸ್ಯಾಸ್ಪದ ಅಂದ್ರೆ ತಲೆ ಬುಡವಿಲ್ಲದ ಸಮರ್ಥನೆ.
ಅಧಿಕಾರಿಗೆ ಬೇರೆ ರೂಮ್, ಅಧಿಕಾರಿ ಪತ್ನಿಗೆ ಬೇರೊಂದು ರೂಮ್ ಅನ್ನು ಬುಕ್ ಮಾಡಲಾಗುತ್ತದೆಯೇ. ಅವರಿಬ್ಬರೂ ಒಂದೇ ರೂಮ್ ನಲ್ಲಿ ವಾಸ್ತವ್ಯ ಹೂಡುತ್ತಾರೆ ತಾನೇ. ಊಟ ತಿಂಡಿಯ ಬಿಲ್ ಗಳನ್ನು ಪ್ರತ್ಯೇಕವಾಗಿ ತರಿಸಿಕೊಳ್ಳುತ್ತಾರೆಯೇ. ಏರ್ ಪೋರ್ಟ್ ನಿಂದ ಹೋಟೆಲ್ ಗೆ ಕಾರಿನಲ್ಲಿ ಪ್ರತ್ಯೇಕವಾಗಿ ಹೋಗುತ್ತಾರೆಯೇ ಇಲ್ಲ ತಾನೇ. ಅಂದ ಮೇಲೆ ಇದು ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ತಾನೇ.
ಈ ಸಚಿವರ ದುಂದು ವೆಚ್ಚಕ್ಕೆ ಬ್ರೇಕ್ ಹಾಕಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಈ ವಿಷಯವನ್ನು ಟ್ವೀಟ್ ಮಾಡಿಹೇಳಬೇಕು.
Discussion about this post