ಸುಮಲತಾ ಅಂಬರೀಶ್ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜಕೀಯ ಎಂಟ್ರಿ ಹೊಡೆದಾಗ, ಜೆಡಿಎಸ್ ನಾಯಕರು ಈ ಮಟ್ಟಕ್ಕೆ ಇಳಿದು ವೈಯುಕ್ತಿಕವಾಗಿ ದಾಳಿ ಮಾಡುತ್ತಾರೆ ಅನ್ನುವ ಕಲ್ಪನೆ ರಾಜ್ಯಜ ಜನತೆಗೆ ಇರಲಿಲ್ಲ.
ಇದೀಗ ದಳಪತಿಗಳ ಅಸಲಿ ಮುಖ ಅನಾವರಣಗೊಂಡಿದೆ. ಒಬ್ಬರು ಮಂಡ್ಯದ ಗೌಡ್ತಿ ಅಲ್ಲ ಅಂದ್ರು, ಮತ್ತೊಬ್ಬರು ಬಣ್ಣದ ಲೋಕದವರನ್ನು ನಂಬ ಬೇಡಿ ಅಂದ್ರೆ, ದೇವೇಗೌಡರ ಪುತ್ರ ರೇವಣ್ಣ ಅಂಬಿ ಸಾವಿನ ವಿಷಯದಲ್ಲೇ ರಾಜಕೀಯ ಪ್ರಾರಂಭಿಸಿದರು.
ಈ ಎಲ್ಲಾ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಸುಮಲತಾ , ಈ ರೀತಿಯ ಟೀಕೆಗಳು ರಾಜಕಾರಣದಿಂದ ಹೊರತಾಗಿಲ್ಲ. ಕೆಲವರು ವೈಯಕ್ತಿಕ ವಿಚಾರಗಳನ್ನೇ ಬಳಸಿಕೊಂಡು ವಾಗ್ದಾಳಿ ನಡೆಸುತ್ತಾರೆ. ಇದು ಅವರಿಗೆ ಅಭ್ಯಾಸ. ಇದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇದು ನಮ್ಮ ಸಂಸ್ಕಾರವೂ ಅಲ್ಲ. ಅಂಬರೀಶ್ ಅವರು 25 ವರ್ಷ ರಾಜಕೀಯದಲ್ಲಿ ಇದ್ದರೂ ಯಾರೊಬ್ಬರ ವಿರುದ್ಧವೂ ಟೀಕೆ ಮಾಡಲಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ರೀತಿಯ ಟೀಕೆಗಳಿಗೆ ಜನರೇ ಉತ್ತರ ನೀಡಲಿದ್ದು, ನನಗೆ ರಾಜಕಾರಣಕ್ಕಿಂತ ಸಂಬಂಧಗಳೇ ಮುಖ್ಯ ಅನ್ನುವ ಮೂಲಕ ದಳಪತಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಅಂಬರೀಶ್ ತಂದೆ ಸ್ಥಾನದಲ್ಲಿ ಕಾಣುತ್ತಿದ್ದರು. ಹೀಗಾಗಿ ಅವರ ಕುಟುಂಬದವರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಪಕ್ಷದಿಂದ ಮೆಚ್ಚುಗೆ ಬೇಕಿತ್ತು. ಹೀಗಾಗಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಾನು ಬೇಜಾರು ಮಾಡಿಕೊಳ್ಳಲ್ಲ ಅನ್ನುವ ಮೂಲಕ, ಸುಮಲತಾ ಅವರ ವಿರುದ್ಧ ವೈಯುಕ್ತಿಕ ಟೀಕೆ ಮಾಡಿದವರ ಯೋಗ್ಯತೆ ಏನು ಅನ್ನುವುದನ್ನು ಬಹಿರಂಗ ಮಾಡಿದ್ದಾರೆ.
ಹಾಗೇ ನೋಡಿದರೆ ಸುಮಲತಾ ವಿರುದ್ಧ ದಳಪತಿಗಳು ಹೀಗೆಲ್ಲಾ ಮಾತನಾಡುತ್ತಿರುವುದು ಒಳ್ಳೆಯದಾಯ್ತು. ಇಲ್ಲವಾದರೆ ಜೆಡಿಎಸ್ ನಾಯಕರ ಅಸಲಿ ಮುಖ ಏನು ಅನ್ನುವುದು ಬಯಲಾಗುತ್ತಿರಲಿಲ್ಲ.
ಸುಮಲತಾ ವಿರುದ್ಧ ಟೀಕೆ ಮಾಡಿದಷ್ಟೂ, ಜನ ಅವರ ಬೆಂಬಲಕ್ಕೆ ನಿಲ್ಲುತ್ತಾರೆ ಅನ್ನುವ ಸಾಮಾನ್ಯ ಜ್ಞಾನವಿಲ್ಲದ ಮಂದಿ ಕುಟುಂಬ ರಾಜಕೀಯದಲ್ಲಿ ನಿರತರಾಗಿರುವುದು ದುರಂತ. ಸಂಬಂಧ ಬೆಲೆ ಅರಿಯದವರುಸ ಕುಟುಂಬವನ್ನು ರಾಜಕೀಯವಾಗಿ ಬೆಳೆಸುತ್ತಿದ್ದಾರೆ ವಿಪರ್ಯಾಸವೇ ಸರಿ.
ಆದರೆ ತಲೆಗೆ ಸುರಿದ ನೀರು ಕಾಲಿನ ಬುಡ ತಲುಪುತ್ತದೆ ಅನ್ನುವ ಗಾದೆ ಮಾತನ್ನು ರಾಜಕಾರಣಿಗಳು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು.
Discussion about this post