ಪೊಲೀಸ್ ಇಲಾಖೆಯ ಮೇಲೆ ಜನ ನಂಬಿಕೆ ಕಳೆದುಕೊಂಡಾಗಿದೆ. ಕಾಸು ಕೊಟ್ಟು ಹುದ್ದೆ ಗಿಟ್ಟಿಸಿದ ಮಂದಿಯಿಂದ ನ್ಯಾಯ ನಿರೀಕ್ಷಿಸುವುದು ಮೂರ್ಖತನವನಲ್ಲವೇ. ಲಂಚ ಕೊಟ್ಟು ಖಾಕಿ ಧರಿಸಿದವನು ನ್ಯಾಯದ ಪರವಾಗಿ ಇರಲು ಹೇಗೆ ಸಾಧ್ಯ.
ಬೆಂಗಳೂರು : 545 PSI ನೇಮಕಾತಿ ಅಕ್ರಮ ಕುರಿತಂತೆ ಸಿಐಡಿ ತನಿಖೆ ಮುಂದುವರಿಸಿದೆ. ಈ ತನಕ ಕೆಲವೊಂದು ಮಂದಿಯನ್ನು ಬಂಧಿಸಲಾಗಿದ್ದು, ಈ ಅಕ್ರಮದಲ್ಲಿರುವ ದೊಡ್ಡವರು ಯಾರು ಅನ್ನುವುದು ಬಹಿರಂಗವಾಗಿಲ್ಲ. ಈ ನಡುವೆ ಬಗೆದಷ್ಟು ಅಕ್ರಮ ಬಯಲಾಗುತ್ತಿದ್ದು, ನೇಮಕಾತಿ ಕಚೇರಿಯಲ್ಲೇ ಅಕ್ರಮ ನಡೆದಿತ್ತು ಅನ್ನುವ ಅನುಮಾನ ಎದ್ದಿದೆ.
ಈ ಬಗ್ಗೆ ನೊಂದ ಆರೋಪಿಗಳು ಗಂಭೀರ ಆರೋಪ ಮಾಡಿದ್ದು, ಹಾಲ್ ಟಿಕೆಟ್ ನೀಡುವ ಸಂದರ್ಭದಲ್ಲೇ ಅಭ್ಯರ್ಥಿಗಳು ಯಾವ ಪರೀಕ್ಷಾ ಕೇಂದ್ರದಲ್ಲಿ ಕೂರಬೇಕು ಅನ್ನುವುದು ನಿರ್ಧಾರವಾಗಿತ್ತು. ನೇಮಕಾತಿ ಕಚೇರಿಯ ಕೈವಾಡವಿಲ್ಲದೆ ಇವೆಲ್ಲಾ ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಎದ್ದಿದೆ. ಜೊತೆಗೆ ಅಕ್ರಮ ಕುರಿತಂತೆ ವೈರಲ್ ಆಗಿರುವ ಆಡಿಯೋಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಆರೋಪಕ್ಕೆ ಸಾಕಷ್ಟು ಪುಷ್ಟಿಯೂ ದೊರೆಯುತ್ತದೆ.
ಒಂದು ವೇಳೆ ಪೊಲೀಸರ ಮುಖ್ಯ ಕಚೇರಿಯಲ್ಲೇ ಅಕ್ರಮದ ಮೂಲ ಬೇರು ಇದೆ ಅನ್ನುವುದಾದ್ರೆ, ಈ ಹಿಂದೆ ನಡೆದ ಎಲ್ಲಾ ಪೊಲೀಸ್ ನೇಮಕಾತಿಗಳನ್ನು ತನಿಖೆಗೆ ಒಳಪಡಿಸಲೇಬೇಕು. ಹಾಗಂತ ಈ ತನಿಖೆಯನ್ನು ರಾಜ್ಯದ ಪೊಲೀಸರು ನಡೆಸಿದರೆ ನ್ಯಾಯ ಸಿಗುವುದು ಅನುಮಾನ. ಬದಲಾಗಿ ಸಿಬಿಐ ತನಿಖೆಯಾಗಬೇಕು.
Discussion about this post