ಕೊರೋನಾ ಆತಂಕದ ನಡುವೆಯೇ SSLC ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಯನ್ನು ಬರೆದಿದ್ದಾರೆ, ಶಿಕ್ಷಣ ಇಲಾಖೆಯು ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದೆ. ಇಂದು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ಸುಲಲಿತವಾಗಿ ಇಂದು ನಡೆಯಿತು. ಸಹಜ ಅನ್ನಿಸುವ ಸಣ್ಣ ಪುಟ್ಟ ಗೊಂದಲ ಹೊರತುಪಡಿಸಿದರೆ, ಮತ್ಯಾವ ಸಮಸ್ಯೆಗಳು ಎಲ್ಲೂ ಕಂಡು ಬಂದಿಲ್ಲ.
ವಿಶೇಷ ಅಂದ್ರೆ ಎಲ್ಲೆಡೆ ವಿದ್ಯಾರ್ಥಿಗಳಲ್ಲಿ ನಿರೀಕ್ಷೆಗೂ ಮೀರಿದ ಉತ್ಸಾಹ ಕಂಡು ಬಂದಿದ್ದು. ಸುಮಾರು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೆಲವು ಕಡೆ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದಿರಲಿ ಎಂದು ಪರೀಕ್ಷಾರ್ಥಿಗಳಿಗೆ ಉತ್ತೇಜನ ನೀಡುವ ನಿಟ್ಟಿನ ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯ್ತು. ಇನ್ನು ಕೆಲವು ಕಡೆ ಕೆಲವು ಪರೀಕ್ಷಾ ಕೇಂದ್ರಗಳನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಳಿಸಲಾಗಿತ್ತು. ಮತ್ತೆ ಕೆಲವೆಡೆ ತಳಿರು ತೋರಣ, ಸ್ವಾಗತ ಕಮಾನುಗಳನ್ನು ಕಟ್ಟಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಸ್ವಾಗತಿಲಾಯಿತು.
ಈ ನಡುವೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರು ಬೆಂಗಳೂರಿನ ವಿಜಯಾ ಕಾಲೇಜ್ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಮಾತನಾಡಿಸಿ ಧೈರ್ಯ ತುಂಬಿದರು.
ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಕಂಡು ಬಂದಿತ್ತು. ಎಲ್ಲರೂ ಪರಸ್ಪರ ತಮ್ಮ ಸ್ನೇಹಿತರೊಂದಿಗೆ ಹೊಸ ಅನುಭವದಲ್ಲಿ ಪರೀಕ್ಷೆ ಬರೆದಿದ್ದುರ ಬಗ್ಗೆ ಮಾತುಗಳನ್ನಾಡುತ್ತಿದ್ದರು.
Discussion about this post