ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬೆವರ ತೊಡಗಿದ್ದಾರೆ.ಇದೊಂದು ರಾಜಕೀಯ ಪ್ರೇರಿತ ಅನ್ನುವ ಹೇಳಿಕೆ ಉಭಯ ನಾಯಕರದ್ದು. ರಾಜಕೀಯ ಪ್ರೇರಿತ ಹೌದು ಅನ್ನುವುದಕ್ಕೆ ಸಾಕ್ಷಿಗಳಿಲ್ಲ. ಆದರೆ ಅಕ್ರಮ ಅನ್ನುವುದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಅಂಟಿದ ಪಿಡುಗು.
ಎಣ್ಣೆ,ಹಣದ ಹೊಳೆ ಹರಿಸದಿದ್ದರೆ ಚುನಾವಣೆ ಗೆಲ್ಲಲಾಗುವುದಿಲ್ಲ ಅನ್ನುವುದು ಗೊತ್ತಿರುವ ಸತ್ಯ. ಹೀಗಾಗಿ ಅಕ್ರಮ ಅನ್ನುವುದನ್ನು ರಾಜಕೀಯ ಪಕ್ಷಗಳು ಗುತ್ತಿಗೆ ಪಡೆದುಕೊಂಡಿವೆ. ಈಗ ಐಟಿ ದಾಳಿಯಾಗಿರುವುದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ. ಬಿಜೆಪಿಯ ಅದ್ಯಾವ ನಾಯಕನನ್ನೂ ಐಟಿ ಇಲಾಖೆ ಗುರಿ ಮಾಡಿಲ್ಲ. ಇದು ಸಣ್ಣದೊಂದು ಅನುಮಾನದ ವಾಸನೆ ಹುಟ್ಟಿಸಿದೆ.
ಆದರೆ ದಾಳಿಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೊಟ್ಟಿರುವ ಪ್ರತಿಕ್ರಿಯೆ, ಮಾಡೋ ಪ್ರತಿಭಟನೆ ನೋಡಿದ್ರೆ ಐಟಿ ದಾಳಿಗೆ ಸುಮ್ಮನೆ ನಡೆದಿಲ್ಲ ಅನ್ನುವುದನ್ನು ಸ್ಪಷ್ಟಪಡಿಸಿದೆ.
ಒಂದು ವೇಳೆ ಅಕ್ರಮ ನಡೆದಿಲ್ಲ ಅನ್ನುವುದೇ ಆಗಿದ್ದರೆ, ಸಿಎಂ ಕುಮಾರಸ್ವಾಮಿ ಮೈಸೂರಿನಿಂದ ಓಡಿ ಬಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ಅವಶ್ಯಕತೆ ಇರಲಿಲ್ಲ. ಚುನಾವಣಾ ರಣತಂತ್ರ ಭಾಗ ಅನ್ನುವಂತೆ ದೊಡ್ಡ ಮೊತ್ತದ ಹಣಕಾಸು ವಹಿವಾಟು ವಾಸನೆ ಸಿಕ್ಕ ಬಳಿಕವೇ ಐಟಿ ದಾಳಿ ನಡೆಸಿದೆಯೇ ಅನ್ನುವ ಪ್ರಶ್ನೆಗೆ, ಈ ಪ್ರತಿಭಟನೆ ಉತ್ತರದಂತೆ ತೋರುತ್ತಿದೆ.
ಎಲ್ಲಾ ಹಣಕಾಸಿವ ವಹಿವಾಟುಗಳಿಗೆ ಲೆಕ್ಕ ಪತ್ರ ಸರಿಯಾಗಿ ಇದೆ ಅನ್ನುವುದೇ ಆಗಿದ್ದರೆ, ಕುಮಾರಸ್ವಾಮಿ, ಸಿದ್ದರಾಮಯ್ಯ,ಪರಮೇಶ್ವರ್ ಭಯ ಪಡುವ ಅಗತ್ಯವೇನಿದೆ. ದಾಖಲೆ ಪತ್ರಗಳು ಐಟಿ ಅಧಿಕಾರಿಗಳ ಮುಖಕ್ಕೆ ಎಸೆದು, ಅದೇನು ಅಕ್ರಮ ಮಾಡಿದ್ದೇವೆ ಸಾಬೀತು ಮಾಡಿ ಅಂದ್ರೆ ಮುಗಿಯಿತು. ಎಲ್ಲವೂ ಸರಿ ಇದೆ ಅಂದ ಮೇಲೆ ಬಂದ ದಾರಿಗೆ ಸುಂಕವಿಲ್ಲ ಅನ್ನುವಂತೆ ಅಧಿಕಾರಿಗಳು ಹಿಂತಿರುಗುತ್ತಾರೆ. ಆಮೇಲೆ ನೀವೇ ಇದೊಂದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸಬಹುದು.
ಆದರೆ ಐಟಿ ಅಧಿಕಾರಿಗಳ ಮುಂದೆ ಪ್ರಾಮಾಣಿಕರು ಎಂದು ಸಾಬೀತು ಮಾಡುವುದನ್ನು ಬಿಟ್ಟು ಪ್ರತಿಭಟನೆಗೆ ಇಳಿದುರುವುದನ್ನು ನೋಡಿದರೆ, ದೇಶ ಅಪಾಯದಲ್ಲಿದೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವುದರಲ್ಲಿ ಅರ್ಥವಿದೆ ಅನ್ನಿಸುತ್ತಿದೆ.
Discussion about this post