ದೇಶದ ಭದ್ರತೆ ಹಿತದೃಷ್ಟಿಯಿಂದ ಅನ್ಯ ದೇಶದ ಕ್ರಿಮಿನಲ್ಗಳು ನಮ್ಮಲ್ಲಿ ಇರಬಾರದು. ಕೇವಲ ಒಂದು ನಿಮಿಷವೂ ಸಹ ಅವರು ನಮ್ಮ ದೇಶದಲ್ಲಿರಬಾರದು. ತಕ್ಷಣ ಪಾಕಿಸ್ತಾನಿ ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸಬೇಕು. 24 ಗಂಟೆಯೊಳಗೆ ವಾಘಾ ಗಡಿಗೆ ಕರೆದೊಯ್ದ ಬಿಟ್ಟು ಬನ್ನಿ ಎಂದು ರಾಜ್ಯ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದ ಘಟನೆ ಇಂದು ನಡೆದಿದೆ.
ಕೇರಳ ಮೂಲದ ಸಿಹಾದ್ ಅನ್ನೋ ಯುವಕ ಕರಾಚಿಯ ಸಮೀರಾ ಅನ್ನೋ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಬಳಿಕ ಆಕೆಯ ಜೊತೆ ನಾದಿನಿ ಝೈನಬ್ ಹಾಗೂ ಬಾಮೈದ ಕಾಸೀಫ್ ಸಂಶುದ್ದೀನ್ ಅನ್ನೋರನ್ನು ಅಕ್ರಮವಾಗಿ ನೇಪಾಳದ ಮಾರ್ಗದ ಮೂಲಕ ಭಾರತಕ್ಕೆ ಕರೆ ತಂದಿದ್ದ.
ಬಳಿಕ ಹೇಗೋ ಬೆಂಗಳೂರು ಸೇರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸರಹದ್ದಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ.
ಒಂದಿಷ್ಟು ದಿನಗಳ ನಂತ್ರ ಮೇ 25, 2017 ರಂದು ವಿಚಾರ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ಈ ವೇಳೆ ದಾಳಿ ನಡೆಸಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿಯರನ್ನು ಬಂಧಿಸಿದ್ದರು.
ನಂತರ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆದಾಗ ಸಿಹಾದ್, ಸಮೀರಾನನ್ನು ವಿವಾಹವಾಗಿರುವ ಕಾರಣ ಅವರು ಭಾರತದಲ್ಲಿ ಇರಬಹುದು. ಆದರೆ ಸಮೀರಾ ತಂಗಿ ಮತ್ತು ಆಕೆಯ ಸಹೋದರನಿಗೆ ಸೆಷನ್ಸ್ ಕೋರ್ಟ್ 21 ತಿಂಗಳ ಕಾಲ ಜೈಲು ಶಿಕ್ಷೆ ನೀಡಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿತ್ತು.
ಇದಾದ ಬಳಿಕ ತಮ್ಮ ಮೇಲಿನ ಶಿಕ್ಷೆಯ ಪ್ರಮಾಣವನ್ನ ಕಡಿಮೆ ಮಾಡಿ ಎಂದು ಬಂಧಿತ ಝೈನಬ್ ಹಾಗೂ ಬಾಮೈದ ಕಾಸೀಫ್ ಸಂಶುದ್ದೀನ್ ಹೈಕೋರ್ಟ್ ಮೊರೆ ಹೋಗಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅನ್ಯ ದೇಶದವರನ್ನ ಕೂಡಲೇ ಗಡಿಪಾರು ಮಾಡುವಂತೆ ಸೂಚನೆ ನೀಡಿತು.
24 ಗಂಟೆಯೊಳಗೆ ಗಡಿಪಾರು ಮಾಡಿ ಅನ್ನುವ ಆದೇಶ ಕುರಿತಂತೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ಪರ ವಕೀಲರು, ಕಾನೂನು ಪ್ರಕ್ರಿಯೆ ನಡೆಯಬೇಕಾಗಿದೆ.ಎಂದು ಕೋರ್ಟ್ಗೆ ಮನವಿ ಮಾಡಿಕೊಂಡರು. ಹೀಗಾಗಿ ಒಂದಿಷ್ಟು ಕಾಲಾವಕಾಶ ಬೇಕು ಅಂದರು.
ಇದಕ್ಕೆ ಒಪ್ಪಿದ ನ್ಯಾಯಮೂರ್ತಿಗಳು 10 ದಿನಗಳ ಕಾಲ ಅಂದ್ರೆ ಮೇ 5ರೊಳಗೆ ಅವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಸೂಚಿಸಿದರು.
Discussion about this post