ಗದಗ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳನ್ನು, ಅವರ ಕನಸುಗಳನ್ನು ಮಣ್ಣು ಪಾಲು ಮಾಡಲು ಅವರ ಪಕ್ಷದ ನಾಯಕರೇ ಸಾಕು. ಅದೆಷ್ಟು ಸಂಸದರಿಗೆ ಅದೆಷ್ಟು ಶಾಸಕರಿಗೆ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜ್ಞಾನವಿದೆ. ಅದೆಷ್ಟು ಬಿಜೆಪಿಯ ನಾಯಕರು ಕೃಷಿ ಕಾಯ್ದೆ, ಸಿಎಎ ಬಗ್ಗೆ ಮಾತನಾಡಬಲ್ಲರು.
ಹೀಗೆ ಪ್ರಧಾನಮಂತ್ರಿಯವರ ಆದೇಶದಂತೆ ಹಮ್ಮಿಕೊಂಡಿರುವ ಜನಾಶೀರ್ವಾದ ಸಭೆಗಳನ್ನು ನೂತನ ಸಚಿವರು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಈ ಪೈಕಿ ರಾಜ್ಯದಲ್ಲಿ ನಾಲ್ವರು ಕೇಂದ್ರ ಸಚಿವರು ಹಲವಾರು ಭಾಗಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಹಾ ಯಡವಟ್ಟು ಮಾಡಿದ್ದಾರೆ.
ಗದಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಪ್ರಕಾರ ಗದಗ ತಾಲೂಕಿನ ಮುಳಗುಂದ ಪಟ್ಟಣದ ಮೃತ ಯೋಧ ಬಸವರಾಜ ಹಿರೇಮಠ ಅವರ ಮನೆಗೆ ಭೇಟಿ ಕೊಡಬೇಕಾಗಿತ್ತು. ಬಸವರಾಜ ಹಿರೇಮಠ ಅವರು ಒಂದೂವರೆ ವರ್ಷದ ಹಿಂದೆ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಮಾನ್ಯ ಸಚಿವರು ರವಿಕುಮಾರ ಕಟ್ಟಿಮನಿ ಅನ್ನುವ ಮತ್ತೊಬ್ಬ ಯೋಧನ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದಾರೆ.
ಆ ವೇಳೆ ಸಚಿವರ ನಡೆ ನುಡಿ ನೋಡಿದ ಮನೆ ಮಂದಿ ಮೊದಲು ಗಾಬರಿಯಾಗಿದ್ದರು. ಅಷ್ಟೇ ಅಲ್ಲದೆ ಯೋಧನ ಪತ್ನಿಗೆ ಸರ್ಕಾರಿ ನೌಕರಿ ಜಮೀನು ಕೊಡುವ ಭರವಸೆಯನ್ನೂ ಕೊಟ್ಟಿದ್ದಾರೆ. ಈ ಹೇಳಿಕೆಯಿಂದ ಮನೆಯವರು ಕಂಗಲಾಗಿದ್ದಾರೆ. ಯಾವಾಗ ಕಟ್ಟಿಮನಿ ಪತ್ನಿ ತನ್ನ ಗಂಡ ಚೀನಾ ಬಾರ್ಡರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂದ್ರೋ ಆಗಿರುವ ಯಡವಟ್ಟು ನಾರಾಯಣಸ್ವಾಮಿ ಗಮನಕ್ಕೆ ಬಂತು. ಹೀಗಾಗಿ ಹೇಗೋ ಪ್ಯಾಚಪ್ ಮಾಡಿ, ನಿಮ್ಮ ಮನೆ ಸದಸ್ಯನ ದೇಶ ಸೇವೆಗೊಂದು ಸಲಾಂ ಎಂದು ಹೊರ ಬಂದಿದ್ದಾರೆ.
ಜನಪ್ರತಿನಿಧಿಯಾದವರಿಗೆ ಕನಿಷ್ಠ ಜ್ಞಾನ ಇಲ್ಲದಿದ್ರೆ ಹೀಗಾಗುತ್ತದೆ. ಕನಿಷ್ಟ ಪಕ್ಷ ಯೋಧನ ಮನೆಗೆ ಹೋಗುವ ಮುನ್ನ ಸಚಿವರು ಯೋಧನ ಬಗ್ಗೆ ತಿಳಿದುಕೊಂಡಿರಬೇಕಿತ್ತು ತಾನೇ. ಹೀಗೆ ಯಾರೋ ಹೇಳಿದ್ರು ಅಂತಾ ಎಲ್ಲೋ ನುಗ್ಗಿದ್ರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ಪ್ರಯತ್ನವೇ ಪಡಬೇಕಾಗಿಲ್ಲ. ಇವರಂತಹ ನಾಯಕರೇ ಸೋಲಿಸಿ ಬಿಡುತ್ತಾರೆ.
Discussion about this post