ಮಂಡ್ಯ ಚುನಾವಣಾ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಸೇರಿದಂತೆ ದಳಪತಿಗಳು ದರ್ಶನ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಆ ಸಂದರ್ಭದಲ್ಲಿ ಯಶ್ ಮತ್ತು ಸುಮಲತಾ ತಿರುಗೇಟು ಕೊಟ್ಟಿದ್ದರು. ಆದರೆ ದರ್ಶನ್ ಮಾತ್ರ ಖಾರ ಪ್ರತಿಕ್ರಿಯೆಗೆ ಹೋಗಿರಲಿಲ್ಲ.
ಪ್ರಚಾರದ ಕೊನೆಯ ದಿನವೂ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದು ನಿಂತವರು ದೊಡ್ಡ ಮಟ್ಟದ ತಿರುಗೇಟು ಕೊಟ್ಟಿರಲಿಲ್ಲ.
ಆದರೆ ಇದೀಗ ನಿಧಾನವಾಗಿ ಬಾಣ ಪ್ರಯೋಗಿಸಲಾರಂಭಿಸಿದ್ದಾರೆ. ಹಾಗಂತ ಅವರು ಎಲ್ಲೂ ಕೂಡಾ ದಳಪತಿಗಳ ಹೆಸರು ಪ್ರಸ್ತಾಪಿಸುತ್ತಿಲ್ಲ. ಸರ್ಕಾರದತ್ತ ಮುಖ ಕೈ ಜೋಡಿಸಿ ಪ್ರಾರ್ಥಿಸುತ್ತಿದ್ದಾರೆ.
ಅಷ್ಟಕ್ಕೇ ದಳಪತಿಗಳು ಕೆರಳಿ ಹೋಗಿದ್ದಾರೆ. ಕಾಂಗ್ರೆಸ್ ಕೂಡಾ ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿದ್ದರೂ ಕೂಡಾ, ಅದ್ಯಾಕೆ ಜೆಡಿಎಸ್ ನಾಯಕರು ಮಾತ್ರ ದರ್ಶನ್ ಮಾತು ಕೇಳಿ ಉರಿದು ಬೀಳುತ್ತಿದ್ದಾರೆ ಗೊತ್ತಾಗುತ್ತಿಲ್ಲ.
ಇಂದು ಕೂಡಾ ಹೀಗೆ ಆಗಿದೆ.ಬೆಂಗಳೂರಿನ ಬಿಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ, ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ಗಡಿ ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲ ಮನ್ನಾ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲ ಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದಿದ್ದಾರೆ.
ಎಲ್ಲಾ ಮಾಧ್ಯಮಗಳಲ್ಲಿ ದರ್ಶನ್ ಟಾಂಗ್ ಎಂದು ವರದಿಯಾಗಿದೆ. ಆದರೆ ನಮಗೆ ಇದು ಟಾಂಗ್ ಎಂದು ಅನ್ನಿಸುತ್ತಿಲ್ಲ. ಬದಲಾಗಿ ಎಲ್ಲಾ ರೈತರ ಸಾಲಮನ್ನಾ ಆಗಿಲ್ಲ ಅನ್ನುವುದು ಸತ್ಯ. ಹೀಗಾಗಿ ರೈತರು ಸಾಲಮನ್ನಾ ಆಗಿಲ್ಲ ಅನ್ನುತ್ತಿದ್ದಾರೆ.
ಹೀಗಾಗಿ ಬೆಂಬಲ ಬೆಲೆ ಕೊಡಿ ಎಂದು ದರ್ಶನ್ ಹೇಳಿರುವುದರಲ್ಲಿ ಸತ್ಯಾಂಶವಿದೆ. ನಿಜವಾಗಿಯೂ ರೈತರಿಗೆ ಬೇಕಾಗಿರುವುದು ಬೆಳೆದ ಬೆಳೆಗೆ ಸೂಕ್ತ ಬೆಲೆ. ಆಹಾರ ಮತ್ತು ವಾಣಿಜ್ಯ ಕೃಷಿ ಉತ್ಫನ್ನಗಳಿಗೆ ಸರಿಯಾದ ಬೆಲೆ ಸಿಕ್ತು ಅಂದ್ರೆ ರೈತರು ಸಾಲಮನ್ನಾ ಮಾಡಿ ಎಂದು ಕೇಳುವುದೇ ಇಲ್ಲ.
ದರ್ಶನ್ ಮಾಡಿದ ಮನವಿಗೆ ಅದ್ಯಾಕೆ ದಳಪತಿಗಳು ತಿರುಗಿ ಬಿದ್ದರು ಅನ್ನುವುದೇ ಅರ್ಥವಾಗುತ್ತಿಲ್ಲ.
Discussion about this post