ಸಮುದ್ರದ ಮೀನುಗಳಿಗೆ ರಾಸಾಯನಿಕ ಬಳಸಲಾಗುತ್ತಿದೆ ಅನ್ನುವ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೃಷ್ಟದಿಂದ ರಾಜ್ಯದ ಕರಾವಳಿ ಭಾಗದಲ್ಲಿ ರಾಸಾಯನಿಕ ಬಳಸಿದ ಮೀನುಗಳು ಪತ್ತೆಯಾಗಿಲ್ಲ ಅನ್ನುವುದು ನೆಮ್ಮದಿ.
ಮನುಷ್ಯರ ಹೆಣ ಹಾಳಾಗದಂತೆ ಬಳಸುವ ರಾಸಾಯನಿಕವನ್ನೇ ಮೀನುಗಳು ಕೆಡದಂತೆ ಬಳಸುವ ದಂಧೆಯೊಂದು ಅನಾವರಣಗೊಂಡು ಮೀನು ಪ್ರಿಯರು ತಲ್ಲಣಗೊಂಡಿದ್ದರು.
ರಾಸಾಯನಿಕ ಬಳಿದ ಮೀನು ತಿಂದರೆ ಆ ರೋಗ ಬರುತ್ತದೆ, ಈ ರೋಗ ಬರುತ್ತದೆ ಎಂದು ಎಲ್ಲರೂ ಹೇಳಿದ್ದರು.
ಆದರೆ ಬೆಂಗಳೂರಿನಲ್ಲಿ ಸದ್ದಿಲ್ಲದೆ ರೋಗ ಹೊತ್ತುವ ಮೀನುಗಳ ಸಾಕಾಣಿಕೆ ನಡೆಯುತ್ತಿದೆ. ಅದನ್ನೇ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.
ಜೂನ್ ತಿಂಗಳಲ್ಲಿ ನ್ಯೂಸ್ 18 ನ ಸರ್ಜಿಕಲ್ ಸ್ಟೈಕ್ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಶಿಬರೂರು ಇಂತಹುದೊಂದು ಕರಾಳ ದಂಧೆಯನ್ನು ಬಯಲು ಮಾಡಿದ್ದಾರೆ.
ಇಡೀ ಇಂಡಿಯಾದಲ್ಲಿ ಬ್ಯಾನ್ ಆಗಿರುವ ಕ್ಯಾಟ್ ಫಿಶ್ ಅಥವಾ ಆನೆ ಮೀನನ್ನು ಚಿಂತಾಮಣಿ, ಸೂಲಿಬೆಲೆ, ಚಿನ್ನಸಂದ್ರಗಳಲ್ಲಿ ಸಾಕಲಾಗುತ್ತಿದೆ ಎಂದು ಕರಾಳದಂಧೆಯನ್ನು ಬಿಚ್ಚಿಟ್ಟಿದ್ದರು.
ಡೆಡ್ಲಿ ಫಿಶ್ ಮಾಫಿಯಾದ ಪಿನ್ ಟೂ ಪಿನ್ ವಿವರ ಕೊಟ್ಟಿದ್ದ ಅವರು ಕೇವಲ ಚಿಂತಾಮಣಿ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಹೇಳಿದ್ದರು. ಬ್ಯಾನ್ ಆಗಿರುವ ದಂಧೆ ಇಲ್ಲಿ ಬಿಂದಾಸ್ ಎಂದು ಸಾರಿದ್ದರು.
ಕ್ಯಾಟ್ ಫಿಶ್ ಅಪಾಯವೇಕೆ…
ಕ್ಯಾಟ್ ಫಿಶ್ ಸಾಕುವ ಕೊಳಗಳನ್ನು ನೋಡಿದರೆ ಯಾರೊಬ್ಬರೂ ಆ ಮೀನುಗಳನ್ನು ತಿನ್ನಲಾರರು. ಕೊಳೆತು ನಾರುವ ಕೊಳಗಳಲ್ಲಿ ಇದನ್ನು ಸಾಕಲಾಗುತ್ತದೆ. ಇನ್ನು ಇದಕ್ಕೆ ಆಹಾರ ಸತ್ತ ಪ್ರಾಣಿಗಳು.
ಸತ್ತ ದನ,ನಾಯಿಯ ಶವ ತಂದು ಇದೇ ಕೆರೆಗೆ ಹಾಕಲಾಗುತ್ತದೆ. ವಿಕೃತ ಮೀನಿಗೆ ಕೊಳೆತ ಮಾಂಸ, ಮಾಂಸದ ತ್ಯಾಜ್ಯಗಳನ್ನು ಸುರಿಯಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ.
ಇನ್ನು ಈ ಮೀನನಲ್ಲಿ ಪಾದರಸ ಅಂಶವಿದ್ದು, ನರವ್ಯೂಹವನ್ನೇ ತಿಂದು ಹಾಕುತ್ತದೆ. ಈ ಮೀನಿನ ಮಾಂಸದೊಳಗಿದೆ ವಿಷಕಾರಿ ಅಂಶ ಕ್ಯಾನ್ಸರ್ ಕಾರಕ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರೆ.
ಗರ್ಭಿಣಿಯರು ತಿಂದರೆ ಮುಗಿಯಿತು ಕಥೆ. ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆಯಂತೆ.
ರಕ್ತ ಹೆಪ್ಪು ಗಟ್ಟಿಸುವ ಸಾಮರ್ಥ್ಯ ಈ ಮೀನಿನ ಮಾಂಸಕ್ಕಿದ್ದು, ಹೃದ್ರೋಗಕ್ಕೂ ಕಾರಣವಾಗಬಹುದು.
ಬ್ಯಾನ್ ಆಗಿದ್ದರೂ ಸುಪ್ರೀಂಕೋರ್ಟ್ ಆದೇಶವಿದೆ ಎಂದು ಸುಳ್ಳು ಹೇಳುವ ದಂಧೆಕೋರರು, ಮುಳ್ಳು ಕಡಿಮೆ ಇದ್ದು,ರುಚಿ ಹೆಚ್ಚಿರುವ ಮೀನಿನ ಚರ್ಮ ಸುಲಿದು, ಬೇರೆ ಯಾವುದೋ ಮೀನಿನ ಹೆಸರು ಕೊಟ್ಟು ಮಿಕ್ಸ್ ಮಾಡುತ್ತಾರೆ. ಹೀಗಾಗಿ ಗೊತ್ತಿಲ್ಲದಂತೆ ಇದು ಸಿಲಿಕಾನ್ ಸಿಟಿಯ ಜನರ ಹೊಟ್ಟೆ ಸೇರುತ್ತಿದೆ.
ಇನ್ನು ದಂಧೆ ಕೋರರು ಹೇಳುವಂತೆ UP, MP ಗಳಿಗೆ ಇದನ್ನು ರಫ್ತು ಬೇರೆ ಮಾಡ್ತಾರಂತೆ. ಕೋಲ್ಕತ್ತಾದಿಂದ ಮರಿ ತರಿಸಿಕೊಳ್ಳುವ ದಂಧೆಕೋರರು, ಮೀನು ದಪ್ಪ ಆಗ್ಲಿ ಅಂತಾ ಕೆಮಿಕಲ್ ಬಳಸುತ್ತಾರೆ, ಸ್ಟೆರಾಯಿಡ್ ಕೂಡಾ ಹಾಕ್ತಾರಂತೆ. ಅಲ್ಲಿಗೆ ಲೆಕ್ಕ ಹಾಕಿ ಕೊಳಕು ಕೊಳದ ಮೀನಿನ ಶಕ್ತಿಯನ್ನು.
ಸರ್ಜಿಕಲ್ ಸ್ಟ್ರೈಕ್ ಪ್ರಸಾರವಾಗಿ ಹಲವು ತಿಂಗಳುಗಳೇ ಕಳೆದಿದೆ. ಸಮುದ್ರದ ಮೀನಿಗೆ ರಾಸಾಯನಿಕ ಬೆರೆಸುವ ಅಂಶ ಸದ್ದು ಮಾಡಿತು. ಆದರೆ ಡೆಡ್ಲಿ ಕ್ಯಾಟ್ ಫಿಶ್ ಬಗ್ಗೆ ಯಾರೊಬ್ಬರೂ ಚಕಾರವೆತ್ತಲಿಲ್ಲ.
ಕಲ್ಯಾಣ ರಾಜ್ಯದ ಬಗ್ಗೆ ಮಾತನಾಡುವ ನಾಯಕರು ತುಟಿ ಬಿಚ್ಚಲಿಲ್ಲ. ಬೆಂಗಳೂರು ಹೊರವಲಯದಲ್ಲಿ ತಯಾರಾಗುವ ನಿಧಾನ ವಿಷ, ಮನುಷ್ಯರನ್ನು ಅವರಿಗೆ ಅರಿವಿಲ್ಲದೆ ಕೊಲ್ಲುತ್ತಿದೆ. ಗ್ರಾಹಕರಿಗಂತು ಇದನ್ನು ಪತ್ತೆ ಮಾಡುವುದು ಅಸಾಧ್ಯ.
ಜಿಲ್ಲಾಧಿಕಾರಿಗಳಿಂದ ಹಿಡಿದು ಪಿಡಿಓ ತನಕ ಖಡಕ್ಕ್ ಆದೇಶ ಕೊಟ್ಟು ಕ್ಯಾಟ್ ಫಿಶ್ ಅಡ್ಡೆಗಳಿದ್ದರೆ ಮುಚ್ಚಿಸಿ, ಇಲ್ಲವೇ ಮನೆಗೆ ನಡೆಯಿರಿ ಅಂದರೆ ಈ ದಂಧೆಗೆ ಬ್ರೇಕ್ ಬೀಳುತ್ತಿತ್ತು. ಆದರೆ ಅಧಿಕಾರಿಗಳಿಗೂ ಆದಾಯ ತರುವ ಮೂಲವಾಗಿರುವ ಕ್ಯಾಟ್ ಫಿಶ್ ದಂಧೆಗೆ ಬ್ರೇಕ್ ಹಾಕುವವರು ಯಾರು..?
Discussion about this post