ಬೆಂಗಳೂರು : ಸಿಎಂ ಬಿ.ಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಅನ್ನುವ ಸುದ್ದಿ ಪಕ್ಕಾ ಆಗುತ್ತಿದ್ದಂತೆ ವಲಸೆ ಬಂದು ಸಚಿವರಾದವರಲ್ಲಿ ಸಹಜವಾಗಿಯೇ ಆತಂಕ ಹುಟ್ಟು ಹಾಕಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಸಚಿವರಾದವರು ಯಡಿಯೂರಪ್ಪ ಅವರನ್ನು ನಂಬಿ ವಲಸೆ ಬಂದಿದ್ದರು. ಜೊತೆಗೆ ಅವತ್ತು ನಡೆದ ಆಪರೇಷನ್ ಕಮಲದ ಉಸ್ತುವಾರಿಯನ್ನು ವಿಜಯೇಂದ್ರ ಅವರೇ ವಹಿಸಿದ್ದರು. ಹೈಕಮಾಂಡ್ ಆಗ್ಲಿ, ರಾಜ್ಯ ಬಿಜೆಪಿಯಾಗ್ಲಿ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಅವತ್ತು ಅಪರೇಷನ್ ಕಮಲಕ್ಕೆ ಹಸಿರು ನಿಶಾನೆ ತೋರಿದ್ದ ಹೈಕಮಾಂಡ್ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಬಾರದು ಎಂದು ಸೂಚಿಸಿತ್ತು. ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತೋ ಹೈಕಮಾಂಡ್ ಮಧ್ಯ ಪ್ರವೇಶಿಸಿತ್ತು. ಇದೇ ಕಾರಣದಿಂದ ಆರ್ ಆರ್ ನಗರದಲ್ಲಿ ಗೆದ್ದಿರುವ ಮುನಿರತ್ನ ಇನ್ನೂ ಮಂತ್ರಿಯಾಗಿಲ್ಲ. ಎಂಟಿಬಿ ಮಂತ್ರಿಯಾಗಬೇಕಾದರೆ ಸಿಕ್ಕಾಪಟ್ಟೆ ಚಪ್ಪಲಿ ಸವೆಸಿದ್ದಾರೆ.
ಈ ನಡುವೆ ಯಡಿಯೂರಪ್ಪ ಕುರ್ಚಿಯಿಂದ ಕೆಳಗಿಳಿಯುತ್ತಿದ್ದಂತೆ, ಹೊಸ ಸಂಪುಟದ ರಚನೆಯಾಗಲಿದೆ. ಆ ಸಂದರ್ಭದಲ್ಲಿ ಮಿತ್ರ ಮಂಡಳಿ ಸದಸ್ಯರು ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಅನ್ನುವ ಸುದ್ದಿ ಹರಡಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿರುವ ವಲಸಿಗ ಸಚಿವರು ರಾಜೀನಾಮೆ ಕೊಡಲು ಮುಂದಾಗಿದ್ದಾರೆ ಅನ್ನುವ ಮಾತುಗಳು ಕೇಳಿ ಬಂದಿದೆ. ಭೇಟಿಯಾಗಿರುವುದು ನಿಜ, ಆದರೆ ರಾಜೀನಾಮೆ ಪ್ರಸ್ತಾಪವಾಗಿಲ್ಲ. ಬದಲಾಗಿ ಎರಡು ವರ್ಷಗಳ ಕಾಲ ನಿಮ್ಮ ಹಿತ ಕಾಪಾಡುವುದು ನನ್ನ ಹೊಣೆ ಅನ್ನುವ ಭರವಸೆಯನ್ನು ಯಡಿಯೂರಪ್ಪ ಕೊಟ್ಟಿದ್ದಾರೆ. ಜೊತೆಗೆ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಮೂಲಕ ಹೈಕಮಾಂಡ್ ಮನಸ್ಸು ಗೆಲ್ಲುವಂತೆಯೂ ಅವರು ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಹಾಗಂತ ರಾಜೀನಾಮೆ ಕೊಡಲು ವಲಸೆ ಸಚಿವರಿಗೆ ತಲೆ ಕೆಟ್ಟಿಲ್ಲ. ರಾಜೀನಾಮೆ ಕೊಟ್ಟರೆ ಅವರು ಹೋಗುವುದೆಲ್ಲಿಗೆ. ಈಗಿನ ಸ್ಥಿತಿಯಲ್ಲಿ ಚುನಾವಣೆಗೆ ಹೋಗುವ ಮನಸ್ಥಿತಿ ಅದ್ಯಾವ ಸಚಿವರಿಗೂ ಇಲ್ಲ. ಮಾತೃ ಪಕ್ಷ ಬಿಟ್ಟು ಬಂದ ಸಂದರ್ಭದಲ್ಲಿ ಕೋರ್ಟ್ ಅಲೆದು ಈಗಾಗಲೇ ಅವರು ಸುಸ್ತಾಗಿದ್ದಾರೆ. ಇನ್ನು ಬಿಜೆಪಿ ನಾಯಕರು ಕೂಡಾ ವಲಸಿಗರ ವಿರೋಧ ಕಟ್ಟುವ ಸ್ಥಿತಿಯಲ್ಲಿ ಇಲ್ಲ. ವಿರೋಧ ಕಟ್ಟಿಕೊಂಡರೆ ವಿಶ್ವಾಸ ದ್ರೋಹದ ಹಣೆ ಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಅನ್ನುವುದು ಅವರಿಗೂ ಗೊತ್ತಿದೆ.
ವಲಸಿಗರಿಗೆ ಸಮಸ್ಯೆಯಾಗುವುದಿದ್ರೆ ಅದು ಮುಂದಿನ ಚುನಾವಣೆಯ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮಾತ್ರ. ಅಷ್ಟು ಹೊತ್ತಿಗೆ ವಲಸಿಗ ಸಚಿವರು ಬಿಜೆಪಿಯವರಾಗಿ ಹೋದ್ರೆ ಸಮಸ್ಯೆಯಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಅದಕ್ಕಾಗಿಯೇ ಎಸ್ ಟಿ ಸೋಮಶೇಖರ್ ರೀತಿ, ಜಿಲ್ಲಾ ಬಿಜೆಪಿ ಕಚೇರಿ ಭೇಟಿ, ಆರ್ ಎಸ್ ಎಸ್ ನಾಯಕರ ಭೇಟಿ, ಬಿಜೆಪಿ ಕಾರ್ಯಕರ್ತರೊಂದಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ.
ಇನ್ನು ಸಿಎಂ ಭೇಟಿ ಬಳಿಕ ರಾಜೀನಾಮೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ‘ ಯಾಕ್ರೀ ಮಾತನಾಡುತ್ತೀರಾ ಸುಮ್ಮನೆ.,,.? ಏನೇನೂ ಮಾತನಾಡಬೇಡಿ.ರಾಜೀನಾಮೆ ಕೊಡುವ ಪ್ರಶ್ನೆಯೇ ಬಂದಿಲ್ಲ., ರಾಜೀನಾಮೆ ನೀಡೋಕೆ ನಮಗೆ ತಲೆ ಕೆಟ್ಟಿದ್ಯಾ ಅಂದಿದ್ದಾರೆ.
Discussion about this post