ಬೆಂಗಳೂರು : ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ರಾಜ್ಯದ ಜನತೆಯಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿತ್ತು. ಕಾರಣ ಅವರು ನಡೆದು ಬಂದ ಹಾದಿ. ಮಾತ್ರವಲ್ಲದೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ನನಗೆ ಝೀರೋ ಟ್ರಾಫಿಕ್ ಬೇಡ, ಹಾರ ತುರಾಯಿ ಸನ್ಮಾನ ಬೇಡ ಎಂದು ಘೋಷಿಸಿದ್ದರು. ಈ ಮೂಲಕ ಕಾಮನ್ ಸಿಎ ಅನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದರು.
ಆದರೆ ಅವೆಲ್ಲವೂ ಕೆಲವೇ ತಿಂಗಳುಗಳಿಗೆ ಸೀಮಿತವಾಗಿ ಹೋಯಿತು. ಹಲವು ಅಧಿಕಾರಿಗಳು, ಶಾಸಕರು ಭೇಟಿಯಾದ ಅನೇಕ ಸಂದರ್ಭಗಳಲ್ಲಿ ಹಾರ ತುರಾಯಿ ಹೂ ಗುಚ್ಛಗಳ ವಿನಿಮಯವಾಗಿದೆ.
ಇನ್ನು ಶನಿವಾರ ಮುಖ್ಯಮಂತ್ರಿಗಳು ಸಾರ್ವಜನಿಕ ವೇದಿಕೆಯಲ್ಲೇ ಸನ್ಮಾನ ಸ್ವೀಕರಿಸುವ ಮೂಲಕ ತಮ್ಮ ಮಾತನ್ನು ತಾವೇ ಮುರಿದಿದ್ದಾರೆ. ಅರಣ್ಯ ಅಭಿವೃದ್ಧಿ ನಿಗಮ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಸವರಾಜ ಬೊಮ್ಮಾಯಿ, ನಿಗಮದ ಅಧ್ಯಕ್ಷೆ ತಾರಾ ಅವರಿಂದ ಸನ್ಮಾನ ಸ್ವೀಕರಿಸಿದ್ದಾರೆ.
ಈ ವೇಳೆ ಬೊಮ್ಮಾಯಿಯವರು ತಾರಾ ಅವರು ಶಾಲು ಹೊದಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇವೆಲ್ಲಾ ಬೇಕಾ ಎಂದು ಗರಂ ಆದ್ರೂ ಕೂಡಾ. ಆದರೆ ತಾರಾ ಅವರು ಕೇಳಬೇಕಲ್ವ, ತಮ್ಮದೇ ಶೈಲಿಯಲ್ಲಿ ಬೊಮ್ಮಾಯಿಯವರ ಮನವೊಲಿಸಿದ್ದಾರೆ.
ಇನ್ನು ಬೊಮ್ಮಾಯಿ ಸಿಟ್ಟನ್ನು ಗಮನಿಸಿದ ಸಚಿವ ಉಮೇಶ್ ಕತ್ತಿ, ಮುಖ್ಯಮಂತ್ರಿಗಳಿಗೆ ಹಾಕಲು ತಂದ ಟೋಪಿಯನ್ನು ತಾವೇ ಧರಿಸಿಕೊಂಡು ಮುಖ್ಯಮಂತ್ರಿ ಮುಖದಲ್ಲಿ ನಗು ತರಿಸಿದ್ದಾರೆ.
Discussion about this post