ಅಂಬರೀಶ್ ಅವರ ಪಾರ್ಥಿವ ಶರೀರ ಮಂಡ್ಯಕ್ಕೆ ಹೋಗಲು ನಾನೇ ಕಾರಣ, ಅಂಬರೀಶ್ ಮೃತಪಟ್ಟ ದಿನ ನಿಖಿಲ್ ಏನು ಮಾಡಿದ ಅನ್ನುವ ಕುರಿತಂತೆ ಸಿಎಂ ಕುಮಾರಸ್ವಾಮಿ ನೂರಾರು ಬಾರಿ ಸಾವಿರ ಮಾತುಗಳನ್ನು ಹೇಳಿದ್ದಾರೆ.
ಆ ಎಲ್ಲಾ ಮಾತುಗಳನ್ನು ಕೇಳಿ ನುಂಗಿ ಕೂತಿದ್ದ ಅಂಬರೀಶ್ ಪುತ್ರ ಅಭಿಷೇಕ್ ಇಂದು ಅಂದು ಏನು ನಡೆಯಿತು ಅನ್ನುವುದನ್ನು ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ಅದು ನವೆಂಬರ್ 24, ರಾತ್ರಿ 9.30ರ ಸಮಯ, ವಿಕ್ರಂ ಆಸ್ಪತ್ರೆಯಲ್ಲಿ ನಾವೆಲ್ಲಾ ಇದ್ದಾಗ, ಮುಖ್ಯಮಂತ್ರಿಗಳು ಕೂಡಾ ಬಂದ್ರು. ಆಗ ನಾನೇ ಸಿಎಂ ಅವರಿಗೆ ತಂದೆಯವರನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗದಿದ್ದರೆ ತಪ್ಪಾಗುತ್ತದೆ ಅಂದಿದ್ದೆ. ಇದು ನಮ್ಮ ತಂದೆ ಮೇಲಾಣೆ ಸತ್ಯ. ಆದರೆ ಅವರು ಅಲ್ಲಿಗೆ ತೆಗೆದುಕೊಂಡು ಹೋಗುವುದು ಕಷ್ಟ. ಸೆಕ್ಯೂರಿಟಿ ಸಮಸ್ಯೆ, ಜನ ರೊಚ್ಚಿಗೆದ್ದಿದ್ದಾರೆ, ಜನ ಬೆಂಕಿಯಾಗಿದ್ದಾರೆ. ಆಗೋದಿಲ್ಲ ಅಂದ್ರು.
ಇನ್ನು ಬೆಳಗಿನ ಜಾವ 8 ಗಂಟೆ ಕಂಠೀರವ ಸ್ಟುಡಿಯೋ, ಇದೇ ಮುಖ್ಯಮಂತ್ರಿಗಳು ಬರ್ತಾರೆ, ಬೆನ್ನು ತಟ್ಟಿ ಕಿವಿಯಲ್ಲಿ ಹೇಳ್ತಾರೆ ಬೇಜಾರು ಮಾಡ್ಕೋಬೇಡ, ನೀನು ಕೇಳಿದ್ದು ಆಗಲ್ಲಪ್ಪ ಅಂತಾರೆ.
ಅದೇ ಸಂದರ್ಭದಲ್ಲಿ ತಂದೆಯ ದರ್ಶನ ಪಡೆದುಕೊಂಡು ಹೋಗುತ್ತಿದ್ದ ಮಂಡ್ಯದವರು ಹೆಸರು ಕರೆದು ಕೂಗಿ ಕರೆದುಕೊಂಡು ಬಂದಿಲ್ಲ ಅಂದ್ರೆ ನಿನ್ನ ಸುಮ್ನೆ ಬಿಡಲ್ಲ ಅಂತಾರೆ.
ಅಂಬರೀಶ್ ಅವರಿಗೆ ಗೌರವ ಸಲ್ಲಿಸಿದ್ದು ಸರ್ಕಾರವಲ್ಲ ಮುಖ್ಯಮಂತ್ರಿಯಲ್ಲ, ರಾಜ್ಯದ ಜನತೆ ಇದೇ ಮಂಡ್ಯ ಜನತೆ ಎಂದರು.
Discussion about this post