ಬೆಂಗಳೂರು : ಹೇಗಾದರೂ ಸರಿ ಈ ಬಾರಿ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕು ಅನ್ನುವುದು ಕಾಂಗ್ರೆಸ್ ಪಕ್ಷದ ಹಠ. ಅದರಲ್ಲೂ ಡಿಕೆ ಶಿವಕುಮಾರ್ ಅವರಂತು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಕೈ ಪಕ್ಷಕ್ಕೆ ಕಂಟಕವಾಗಲಾರಂಭಿಸಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಕೆಗಾಗಿ ಅವರು ನೀಡುತ್ತಿರುವ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ನಿರ್ಧರಿಸಿದಂತಿದೆ.
ಇದೀಗ ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳ ಪೇಟವನ್ನು ಪ್ರಸ್ತಾಪಿಸಿದ್ದು, ಹಿಂದೂಗಳನ್ನು ಕೆರಳಿಸಿದೆ. ಅದರಲ್ಲೂ ಲಿಂಗಾಯತ ಸಮುದಾಯ ಸಿದ್ದರಾಮಯ್ಯ ಹೇಳಿಕೆಗೆ ಕೆಂಡವಾಗಿದೆ. ಈಗಾಗಲೇ ಕಳೆದ ಚುನಾವಣೆಯಲ್ಲಿ ಧರ್ಮ ಒಡೆಯಲು ಹೊರಟು ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಹಿಜಾಬ್ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳಿಂದ ಅಧಿಕಾರ ವಂಚಿತವಾಗುವ ಸಾಧ್ಯತೆಗಳಿದೆ.
ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪ್ಪಟ ಹಾಕಿದರೆ ತಪ್ಪೇನು, ಹಿಂದೂ ಹೆಣ್ಣು ಮಕ್ಕಳು ಹಾಗೂ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕಿಕೊಂಡರೆ ಅದನ್ನೂ ಪ್ರಶ್ನಿಸುತ್ತೀರಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಸಮುದಾಯದ ಸ್ವಾಮೀಜಿಗಳು ಪೇಟ ಅಥವಾ ಶಾಲನ್ನು ತಲೆಗೆ ಧರಿಸುತ್ತಾರೆ. ಹೀಗಾಗಿ ಸಿದ್ದರಾಮಯ್ಯ ನೀಡಿದ ಹೇಳಿಕೆಯ ಡ್ಯಾಮೇಜ್ ಕಂಟ್ರೋಲ್ ಮಾಡುವುದು ಕೈ ಪಾಳಯಕ್ಕೆ ಖಂಡಿತಾ ಸಾಧ್ಯವಿಲ್ಲ.
ಒಟ್ಟಿನಲ್ಲಿ ಈ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ಸ್ವಯಂ ನಾಶದ ಹಾದಿಯಲ್ಲಿದೆಯೇ ಅನ್ನುವ ಪ್ರಶ್ನೆ ಮೂಡುತ್ತಿದೆ.
Discussion about this post