ಗಜಾನನಂ ಭೂತಗಣಾಧಿಸೇವಿತಂ, ಕಪಿತ್ಥ ಜಂಬೂ ಫಲಸಾರ ಭಕ್ಷಿತಂ… ಈ ಶೋಕ್ಲ ಆಸ್ತಿಕರಾದ ಎಲ್ಲರಿಗೂ ಗೊತ್ತಿದೆ. ಇದೇ ಶೋಕ್ಲದಲ್ಲಿರುವ ಕಪಿತ್ಥ ಫಲ ಯಾವುದು ಎಂದು ಹುಡುಕಿಕೊಂಡು ಹೋದ ಕಾಸರಗೋಡಿನ ಕೃಷಿಕರೊಬ್ಬರು ಇದೀಗ ಕರಾವಳಿಯಲ್ಲಿ ಗಣಪತಿಗೆ ಪ್ರಿಯವಾದ ಈ ಹಣ್ಣನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು ಬದಿಯಡ್ಕ ಸಮೀಪದ ಮೀಸೆಬೈಲು ಕಂಗಿಲ ಶಿವಪ್ರಸಾದ ಎಂಬವರು ಕಪಿತ್ಥ ಫಲದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ನೋಡಲು ಬಿಲ್ಪಪತ್ರೆಯ ಕಾಯಿಯ ಪ್ರತಿರೂಪದಂತಿರುವ ಇದನ್ನು ಉತ್ತರ ಭಾರತ ಮತ್ತು ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಶಿವರಾತ್ರಿಯ ದಿನದಂದು ವಿಶೇಷವಾಗಿ ಉತ್ತರ ಭಾರತದಲ್ಲಿ ದೇವರಿಗೆ ಈ ಹಣ್ಣನ್ನು ಸಮರ್ಪಿಸುತ್ತಾರೆ. ವಿಶೇಷ ಹಬ್ಬ ಹರಿದಿನಗಳಂದು ದೇವರಿಗೆ ಈ ಹಣ್ಣನ್ನು ಸಮರ್ಪಿಸುವ ಕ್ರಮವಿದೆ.
ಹೀಗಾಗಿ ಆ ಕಡೆ ಬೆಳೆಯುವ ಹಣ್ಣನ್ನು ನಮ್ಮ ಕಡೆ ಯಾಕೆ ಬೆಳೆಯಬಾರದು ಎಂದು ನಿರ್ಧರಿಸಿದ ಕೃಷಿಕ ಶಿವಪ್ರಸಾದ್, ಬೆಂಗಳೂರಿನಿಂದ ಹಣ್ಣು ತಿಂದು ಗಿಡ ಮಾಡಿದ್ದಾರೆ. ಇದೀಗ 150ಕ್ಕೂ ಹೆಚ್ಚು ಗಿಡಗಳು ಅವರ ಬಳಿ ಇದ್ದು, ತಮ್ಮಲ್ಲಿರುವ ಕಪಿತ್ಥ ಫಲದ ಗಿಡವನ್ನು ಬೆಳೆಸಲು ಬಯಸುವವರಿಗೆ ಕೊಡಲು ನಿರ್ಧರಿಸಿದ್ದಾರೆ.
ಕೇವಲ ಶ್ಲೋಕಗಳಲ್ಲಿ ಮಾತ್ರ ಕೇಳಿರುವ ಹಣ್ಣು ನಮ್ಮೂರಲ್ಲೂ ಬೆಳೆಯಬೇಕು ಎಂದು ನಿರ್ಧರಿಸಿರುವ ಶಿವಪ್ರಸಾದ್ ಗಿಡ ನೆಟ್ಟು ಪೋಷಿಸಲು ಆಸ್ತಕರಾಗಿರುವವರು ಮಾತ್ರ ತಮ್ಮನ್ನು ಸಂಪರ್ಕಿಸುವಂತೆ ಕೋರಿಕೊಂಡಿದ್ದಾರೆ.
ಅಂದ ಹಾಗೇ ಈ ಹಣ್ಣನ್ನು ಸಂಸ್ಕೃತದಲ್ಲಿ ದಧಿ ಪಲ, ಕನ್ನಡದಲ್ಲಿ ಬೇಲಾ, ಹಿಂದಿಯಲ್ಲಿ ಬೇಲ್, ಇಂಗ್ಲೀಷ್ ನಲ್ಲಿ ವುಡ್ ಆಪಲ್ ಎಂದು ಕರೆಯುತ್ತಾರೆ. ಈ ಹಣ್ಣು ಗಣಪತಿ ಹಾಗೂ ಆನೆಗಳಿಗೆ ಭಾರೀ ಇಷ್ಟವಂತೆ. ಇದರ ಸೇವನೆ ಆರೋಗ್ಯಕ್ಕೂ ಒಳ್ಳೆಯದು ಎನ್ನಲಾಗಿದೆ.
ಇನ್ನು ಗಿಡ ಬೇಕು, ನಾವು ನೆಟ್ಟು ಪೋಷಣೆ ಮಾಡುತ್ತೇವೆ ಅನ್ನುವ ಹಾಗಿದ್ದರೆ ಕಂಗಿಲ ಶಿವಪ್ರಸಾದ್ ಅವರ 6282991799 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಹಗಲು ಹೊತ್ತಿನಲ್ಲಿ ಸಂಪರ್ಕಿಸಿದರೆ ಅವರಿಗೂ ತೊಂದರೆಯಾಗದು.
Discussion about this post