ಬೆಂಗಳೂರು : ಕನ್ನಡ ಆರ್ನಾಬ್ ಖ್ಯಾತಿಯ ಚಂದನ್ ಶರ್ಮಾ ಟಿವಿ5 ವಾಹಿನಿಯಿಂದ ಹೊರ ಬಂದಿದ್ದಾರೆ. ಮತ್ತೆ ತಾವೇ ಕಟ್ಟಿದ ಪವರ್ ಟಿವಿ ಟೀಂ ಅನ್ನು ಅವರು ಸೇರಿಕೊಳ್ಳಲಿದ್ದಾರೆ. ಟಿವಿ9 ಮತ್ತು ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಜೊತೆಗೆ ಚಂದನ್ ಶರ್ಮಾ ತೆರೆ ಹಂಚಿಕೊಳ್ಳಲಿದ್ದಾರೆ.
ಈ ನಡುವೆ ತಮ್ಮ ರಾಜೀನಾಮೆ ಕುರಿತಂತೆ ಮೊದಲ ಬಾರಿಗೆ ಮಾತನಾಡಿರುವ ಚಂದನ್ ಶರ್ಮಾ, ನಾನ್ಯಾಕೆ ಟಿವಿ5ಗೆ ರಾಜೀನಾಮೆ ಕೊಟ್ಟೆ ಅನ್ನುವುದನ್ನು ವಿವರಿಸಿದ್ದಾರೆ.
ನಾನು ಮೊದಲಿನಿಂದಲೂ ತಟಸ್ಥ ಸಿದ್ದಾಂತದ ಪತ್ರಿಕೋದ್ಯಮವನ್ನು ಬಯಸಿದವನು. ದೇಶವನ್ನು ಪ್ರೀತಿಸೋದು, ಸಮಸ್ಯೆ ಇದ್ದಾಗ ಎದ್ದು ನಿಲ್ಲುವುದು,ಆ ಸಮಸ್ಯೆ ಪರಿಹಾರಕ್ಕೆ ಸಹಕರಿಸುವುದು ನನ್ನ ಮೊದಲ ಆದ್ಯತೆ.
ಈ ನಡುವೆ ಎಲ್ಲೂ ಕೂಡಾ ಟಿವಿ5 ಸಂಸ್ಥೆಯ ಹೆಸರು ಹೇಳದೆ, ಟಿವಿ5 ಸಂಸ್ಥೆಯ ಮೇಲೆ ಯಾವುದೇ ನೇರ ಆರೋಪವನ್ನು ಹೊರಿಸದ ಚಂದನ್ ಶರ್ಮಾ ತಾನು ರಾಜೀನಾಮೆ ಕೊಡಲು ಕಾರಣವೇನು ಅನ್ನುವುದನ್ನು ಹೇಳಿದ್ದಾರೆ.
ನ್ಯೂಟ್ರಲ್ ಜರ್ನಲಿಸಂ ಅನ್ನುವ ಕಾನ್ಸೆಪ್ಟ್ ಇಟ್ಟುಕೊಂಡೇ ಪವರ್ ಟಿವಿಯನ್ನು ಕಟ್ಟಲಾಯ್ತು. ಹೀಗಾಗಿ ನನ್ನ ನಿಲುವುಗಳೇನು ಅನ್ನುವುದು ಅಲ್ಲಿಗೆ ಮುಗಿದು ಹೋದ ಅಧ್ಯಾಯ. ಇನ್ನು ನನಗೆ ಯಾರನ್ನೂ ಒಲೈಕೆ ಮಾಡೋ ಅಗತ್ಯವಿಲ್ಲ. ಪ್ರಶ್ನಿಸುವ ಪರಿಸ್ಥಿತಿ ಬಂದಾಗ ಆಡಳಿತದಲ್ಲಿ ಇರುವವರನ್ನೂ ಪ್ರಶ್ನಿಸುತ್ತೇನೆ, ವಿರೋಧ ಪಕ್ಷದಲ್ಲಿ ಕೂತವರನ್ನೂ ಪ್ರಶ್ನಿಸುತ್ತೇನೆ.
ಆದರೆ ಎಷ್ಟು ಗೌರವ ಪೂರ್ವಕವಾಗಿ ಖಂಡಿಸುತ್ತೇನೆ ಅನ್ನುವುದು ಮುಖ್ಯ. ನಾನು ಯಾವುದೋ ವ್ಯಕ್ತಿಯ ವಿರುದ್ಧ ಮಾತನಾಡುತ್ತೇನೆ ಅಂದಾಗ ಆ ವ್ಯಕ್ತಿ ಮುಖ್ಯವಲ್ಲ ಆ ವ್ಯಕ್ತಿ ಇರುವ ಸ್ಥಾನದ ಮಹತ್ವವನ್ನು ನಾವು ಅರಿಯಬೇಕು. ಅವರಿಗೆ ಸಂವಿಧಾನ ಬದ್ಧವಾಗಿ ಕೊಟ್ಟಿರುವ ಅಧಿಕಾರಗಳನ್ನು ಅರಿತುಕೊಳ್ಳಬೇಕು ಅನ್ನುವ ಮೂಲಕ ಟಿವಿ5ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸದಾ ಜರಿಯವ ರಹಸ್ಯದ ಮೂಲದತ್ತ ಬೊಟ್ಟು ಮಾಡಿದ್ದಾರೆ. ಜೊತೆಗೆ ಆತ, ಅವನು, ನೀನು ಅನ್ನುವ ಏಕವಚನ, ಕೆಟ್ಟ ಕೊಳಕು ಭಾಷೆಯನ್ನು ಬಳಸಿ ಬೈಯ್ತಾ ಕೂರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬರೀ ದೂಷಿಸುತ್ತಾ ಕೂತ್ರೆ ಆಗೋದಿಲ್ಲ, ದೂಷಿಸುವುದೇ ನನ್ನ ಕೆಲಸವಲ್ಲ, ತಪ್ಪಾದ್ರೆ ದೂಷಿಸೋಣ. ಜೊತೆಗೆ ಅದಕ್ಕೊಂದು ಪರಿಹಾರವನ್ನೂ ಕೂಡಾ ನಾವು ಸೂಚಿಸಬೇಕು. ಪರಿಹಾರ ಸೂಚಿಸಲು ಸಾಧ್ಯವಿಲ್ಲ ಅಂದ ಮೇಲೆ ಬೈಯುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಿರುವ ಚಂದನ್ ಶರ್ಮಾ ಬೈಯ್ತ ಕೂತ್ಕೂಕೊಳ್ಳಿ…. ಬೈಯ್ತ ಕೂತ್ಕೂಕೊಳ್ಳಿ.. ಬೈಯ್ತ ಕೂತ್ಕೂಕೊಳ್ಳಿ ಅನ್ನುವುದರಲ್ಲಿ ನನಗೆ ನಂಬಿಕೆ ಇಲ್ಲ ಅಂದಿದ್ದಾರೆ.
ಬೈಯೋದು ಅಂದ್ರೆ ಅದು ತಪ್ಪನ್ನು ಸರಿಮಾಡಿಕೊಳ್ಳಿ ಅನ್ನುವ ಒತ್ತಾಯ ಅಂದಿರುವ ಚಂದನ್ ಹಾಗಂತ ಪ್ರಧಾನ ಮಂತ್ರಿಯವರನ್ನೂ ಹಿಂದೆಯೂ ಬೈಯ್ದಿರುವೆ ಮುಂದೆಯೂ ಬೈಯುತ್ತೇನೆ, ಆದರೆ ಅದಕ್ಕೊಂದು ಸಕಾರಣವಿರಬೇಕು ಅಂದಿದ್ದಾರೆ.
Discussion about this post