ಭಾನುವಾರ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ ಎಸ್.ಜೈಪಾಲ್ ರೆಡ್ಡಿ ಅವರನ್ನು ನೆನೆದು ಉಪರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಕಣ್ಣೀರು ಹಾಕಿದರು.
ರಾಜ್ಯಸಭಾ ಕಲಾಪದ ಮಧ್ಯೆ ಜೈಪಾಲ್ ನಿಧನವಾರ್ತೆಯನ್ನು ಓದುತ್ತಲೇ ಭಾವುಕರಾದ ಅವರು ಅತ್ತುಬಿಟ್ಟರು.
ರಾಜ್ಯಸಭಾ ಕಲಾಪದ ವೇಳೆ ಜೈಪಾಲ್ ರೆಡ್ಡಿ ನಿಧನದ ಬಗ್ಗೆ ಮಾತನಾಡಿದ ವೆಂಕಯ್ಯನಾಯ್ಡು, ನಾವಿಬ್ಬರೂ ತುಂಬ ಒಳ್ಳೆಯ ಸ್ನೇಹಿತರಾಗಿದ್ದವರು. ನಾಲ್ಕು ದಶಕಗಳಿಂದ ಒಟ್ಟಿಗೆ ಇದ್ದೆವು. ನನಗೆ ಅವರ ನೋವಿನ ದುಃಖವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದರು.
ಜೈಪಾಲ್ ರೆಡ್ಡಿಯವರ ಜತೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡ ನಾಯ್ಡು, ಜೈಪಾಲ್ ರೆಡ್ಡಿ ಓರ್ವ ಅದ್ಭುತ ವಾಗ್ಮಿ ಮತ್ತು ಸಮರ್ಥ ಆಡಳಿತಗಾರ. 1970ರ ಕಾಲದಲ್ಲಿ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ನಾವಿಬ್ಬರೂ ಒಂದೇ ಬೆಂಚ್ನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಜನರ ಸಮಸ್ಯೆಗಳ ಬಗ್ಗೆ ನಮ್ಮದೇ ರೀತಿಯಲ್ಲಿ ವಾದ ಮಂಡನೆ ಮಾಡುತ್ತಿದ್ದೆವು ಎಂದು ಭಾವುಕರಾದರು.
ಆ ದಿನಗಳಲ್ಲಿ ವಿಧಾನಸಭೆ ಕಲಾಪ ಬೆಳಗ್ಗೆ 8ಗಂಟೆಗೆ ಶುರುವಾಗುತ್ತಿತ್ತು. ಆದರೆ ನಾವಿಬ್ಬರೂ ಏಳು ಗಂಟೆಗೆ ಭೇಟಿಯಾಗುತ್ತಿದ್ದೆವು. ತಿಂಡಿ ತಿನ್ನುತ್ತ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಅವರಿನ್ನು ಇಲ್ಲ ಅನ್ನುವುದನ್ನು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದರು.
ವೆಂಕಯ್ಯ ನಾಯ್ಡು ಅವರು ಕಣ್ಣೀರು ಹಾಕುತ್ತಿದ್ದಂತೆ ಇಡೀ ರಾಜ್ಯಸಭೆಯಲ್ಲಿ ಮೌನ ಆವರಿಸಿತು.
Discussion about this post