ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದ ಅನರ್ಹ ಶಾಸಕರು ಸೇರಿ ಎಲ್ಲರ ಚಿತ್ತ ಈಗ ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದ್ದು, ನಿರಾಳತೆ ಸಿಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.
ಈ ಸಂಬಂಧ ಅನರ್ಹ ಶಾಸಕರು ದಿಲ್ಲಿಯಲ್ಲಿಯೇ ಬೀಡುಬಿಟ್ಟು ತಮ್ಮ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ತಮಗೆ ಸುಪ್ರೀಂ ನಿರಾಳತೆ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಇನ್ನು ಸುಪ್ರೀಂ ಕೋರ್ಟ್ ಸೆ.30ರೊಳಗೆ ಅಂತಿಮ ತೀರ್ಮಾನಕ್ಕೆ ಬರಲಿದ್ದು, ಚುನಾವಣೆಗೆ ಸ್ಪರ್ಧಿಸುವ ತಮ್ಮ ಹಾದಿ ಸುಗಮ ವಾಗಲಿದೆ ಎಂದು ಅನರ್ಹ ಶಾಸಕರು ನಂಬಿದ್ದಾರೆ.
ಹೀಗಾಗಿ ತಮ್ಮನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿರುವ ಆದೇಶಕ್ಕೆ ತಡೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬೇಕು ಅನ್ನುವ ವಾದವನ್ನು ಅನರ್ಹ ಶಾಸಕರು ಸುಪ್ರೀಂ ಕೋರ್ಟ್ನಲ್ಲಿ ಮಂಡಿಸಲಿದ್ದಾರೆ.
ಇದಕ್ಕೆ ತಮಿಳುನಾಡಿನ ಎಐಎಡಿಎಂಕೆ 18 ಮಂದಿ ಅನರ್ಹ ಶಾಸಕರ ಪ್ರಕರಣದ ಉದಾಹರಣೆ ಕೊಡುವ ಸಾಧ್ಯತೆಗಳಿದೆ. ಜೊತೆಗೆ ತಮ್ಮ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಚುನಾವಣೆಗೆ ತಡೆ ನೀಡಬೇಕು ಎಂದು ಕೇಳುವ ಸಾಧ್ಯತೆಗಳಿದೆ.
ಈ ನಡುವೆ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಅಶ್ವತ್ಥನಾರಾಯಣ ಅವರು ಅನರ್ಹ ಶಾಸಕರ ಪರ ವಾದ ಮಂಡಿಸಲಿರುವ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚೆ ನಡೆಸಿದರು.
Discussion about this post