ಇತ್ತ ಅನರ್ಹ ಶಾಸಕರು ಬಿಜೆಪಿ ಸೇರಿ ಗೆಲುವಿನ ನಗೆ ಬೀರುತ್ತಿದ್ದಂತೆ ಸಂಪುಟ ವಿಸ್ತರಣೆಯ ಅನಿವಾರ್ಯತೆ ಉಂಟಾಗಿದೆ. ಆದರೆ ಈ ಬಗ್ಗೆ ಇನ್ನೂ ಬಿಜೆಪಿ ಹೈಕಮಾಂಡ್ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಅನ್ನುವ ಗೊಂದಲವಿದೆ.
ಹೀಗಾಗಿ ಸಚಿವ ಸ್ಥಾನ ಆಕಾಂಕ್ಷಿಗಳು ನಮಗೊಂದು ಖಾತೆ ಕೊಡಿಸಿ ಎಂದು ಮುಖ್ಯಮಂತ್ರಿಗಳ ಬೆನ್ನು ಹತ್ತಿದ್ದಾರೆ. ಈ ನಡುವೆ ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಉಮೇಶ್ ಕತ್ತಿ, ಎಂಟು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಹಿಂದಿನಿಂದಲೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಈಗಲೂ ಮತ್ತೆ ಮುಂದೆಯೂ ನಾನು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದೇನೆ. ಕೊಡುವುದಾದರೆ ನನಗೆ ಮಂತ್ರಿ ಸ್ಥಾನ ಕೊಡಲಿ. ಇಲ್ಲವಾದರೆ ಮುಖ್ಯಮಂತ್ರಿ ಸ್ಥಾನ ಕೊಡಲಿ ಅಂದಿದ್ದಾರೆ.
ಈ ಹಿಂದೆಯೂ ಕಾಂಗ್ರೆಸ್ ಅವಧಿಯಲ್ಲಿ ಉಮೇಶ್ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ಮಾಡುವ ಹೇಳಿಕೆ ಕೊಟ್ಟು ವಿವಾದ ಮೆತ್ತಿಕೊಂಡಿದ್ದರು. ಪ್ರತ್ಯೇಕ ನಾಡಧ್ವಜಕ್ಕೂ ಅವರು ಬೇಡಿಕೆ ಇಟ್ಟಿದ್ದರು. ಇದೀಗ ಮುಖ್ಯಮಂತ್ರಿ ಸ್ಥಾನ ಬೇಕು ಅನ್ನುವ ಮೂಲಕ ಮತ್ತೆ ಬಿಜೆಪಿ ನಾಯಕರಲ್ಲಿ ಗಾಬರಿ ಹುಟ್ಟಿಸಿದ್ದಾರೆ.
ಆದರೆ ಉಮೇಶ್ ಕತ್ತಿ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಸರ್ಕಾರ ಉರುಳಿಸುವ ಮಟ್ಟಿನ ಬಂಡಾಯ ಎಬ್ಬಿಸುವ ತಾಕತ್ತು ಉಮೇಶ್ ಕತ್ತಿಗಿಲ್ಲ. ಆದರೆ ಎಡವಟ್ಟು ಹೇಳಿಕೆ ಕೊಟ್ಟು ಬಿಜೆಪಿಯನ್ನು ಮುಜುಗರಕ್ಕೆ ಈಡು ಮಾಡುವ ತಾಕತ್ತು ಮಾತ್ರ ಉಮೇಶ್ ಕತ್ತಿಗಿದೆ. ಹೀಗಾಗಿ ಸಚಿವ ಸ್ಥಾನವೊಂದನ್ನು ಕೊಟ್ಟು ಕೈ ತೊಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಿದೆ.
Discussion about this post