ಉಡುಪಿ : ಈ ನೆಲದಲ್ಲಿ ಬಡವನಿಗೊಂದು ಕಾನೂನು ಉಳ್ಳವನಿಗೊಂದು ಕಾನೂನು ಅನ್ನುವ ಕಾರಣದಿಂದ ಈ ಸಮಸ್ಯೆ ಉದ್ಭವವಾಗುತ್ತಿದೆ. ಕೊರೋನಾ ಸೋಂಕಿತರಾಗಿರುವ ಜನ ಸಾಮಾನ್ಯರು ಬೆಡ್ ಇಲ್ಲದೆ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದಾರೆ.
ಅದ್ಯಾವ ರಾಜಕಾರಣಿ ಬೆಡ್ ಇಲ್ಲದೆ ಪರದಾಡಿದ್ದಾರೆ ಹೇಳಿ. ಹಾಗೇ ಕೊರೋನಾ ನಿಯಂತ್ರಣದ ಕಾನೂನುಗಳು. ರಾಜಕಾರಣಿಗಳು ಕಾನೂನು ಉಲ್ಲಂಘಿಸಿದರು, ಸೆಲೆಬ್ರೆಟಿಗಳು ಮಾಸ್ಕ್ ಹಾಕದೇ ಕುಣಿದು ಕುಪ್ಪಳಿಸಿದರು.
ಇದನ್ನು ನೋಡಿದ ಜನ ಅರೇ ಅವರು ಯಾರೊಬ್ಬರೂ ನಿಯಮ ಪಾಲಿಸುತ್ತಿಲ್ಲ ನಾವ್ಯಾಕೆ ಪಾಲಿಸೋಣ ಅಂದರು. ಹೀಗಾಗಿ ಸಮಾಜಕ್ಕೆ ಮಾದರಿ ಅಂದುಕೊಂಡವರನ್ನು ನಂಬಿದ ಜನ ಹಳ್ಳಕ್ಕೆ ಬಿದ್ದರು.
ಈಗ ರಾಜ್ಯ ರಾಜಧಾನಿಯಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಒಂದೇ ಒಂದು ಬೆಡ್ ಬೇಕು ಅಂದರೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೇ ದಿನ ಕಳೆದರೆ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಕ್ಸಿಜನ್, ಬೆಡ್ ಗಾಗಿ ಪರದಾಡಬೇಕಾಗುತ್ತದೆ.
ಈ ನಡುವೆ ಉಡುಪಿ ಜಿಲ್ಲಾಧಿಕಾರಿಗಳು ಮಾಡಿದ ಯಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಸ್ಕ್ ಹಾಕದೆ ಮೆಹಂದಿ ಕಾರ್ಯಕ್ರಮಕ್ಕೆ ಹೋದ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಜನ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ. ದುರಂತ ಅಂದ್ರೆ ತಮ್ಮ ಮಾಸ್ಕ್ ಹಾಕದ ಕಾರ್ಯವನ್ನು ಜಿಲ್ಲಾಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಇದು ಮನೆಯಲ್ಲಿ ನಡೆದ ಕುಟುಂಬ ಕಾರ್ಯಕ್ರಮವೇ ಹೊರತು ಸಾರ್ವಜನಿಕ ಕಾರ್ಯಕ್ರಮ ಅಲ್ಲ. ನನ್ನ ಮನೆಯ ಪಕ್ಕದಲ್ಲಿರುವ ಹೆಚ್ಚುವರಿ ಎಸ್ಪಿ ಮನೆಯಲ್ಲಿ ಅವರ ಮಗಳ ಮೆಹಂದಿ ಕಾರ್ಯಕ್ರಮವನ್ನು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು.
ಅಲ್ಲಿ ಅವರ ಕ್ಲೋಸ್ ಫ್ಯಾಮಿಲಿಯ ಕೆಲವೇ ಕೆಲವು ಮಂದಿ ಸೇರಿದ್ದರು. ಸಾರ್ವಜನಿಕ ಸ್ಥಳವಲ್ಲದ ಕಾರಣ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯವಲ್ಲ. ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಅಂದಿದ್ದಾರೆ.
ಜೊತೆಗೆ ಶುಕ್ರವಾರ ರಾತ್ರಿ 8.40 ಕ್ಕೆ ಆ ಕಾರ್ಯಕ್ರಮಕ್ಕೆ ಹೋಗಿ 8.50 ಕ್ಕೆ ಕರ್ಫ್ಯೂ ಗಿಂತ ಮೊದಲೇ ಮನೆ ಸೇರಿದ್ದೇನೆ. ಮದುಮಗಳ ಕೋರಿಕೆ ಮೇರೆಗೆ ಆಕೆಯೊಂದಿಗೆ ಫೋಟೊಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ ಅಲ್ಲದೆ ಆ ಕಾರ್ಯಕ್ರಮದಲ್ಲಿ ನಾನು ಊಟ ಕೂಡ ಮಾಡದೆ ಬಂದಿದ್ದೇನೆ ಅಂದಿದ್ದಾರೆ.
ಜಿಲ್ಲಾಧಿಕಾರಿಗಳು ಊಟ ಮಾಡಿದ್ರ ಬಿಟ್ರ ಅನ್ನುವುದು ಪ್ರಶ್ನೆಯಲ್ಲ, ಮದುವೆ, ಗೃಹ ಪ್ರವೇಶ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಇಷ್ಟೇ ಜನ ಸೇರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಮೆಹಂದಿಯ ವಿಡಿಯೋ ನೋಡಿದ್ರೆ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಜನ ಸೇರಿರುವುದು ಕಾಣಿಸುತ್ತಿದೆ. ಹಾಡು ಕುಣಿತಗಳೊಂದಿಗೆ ಮದು ಮಗಳು ಹಾಗೂ ಆಕೆಯ ತಂದೆ ನಡೆದುಕೊಂಡು ಬರುತ್ತಿರುವ ವಿಡಿಯೋ ನೋಡಿದರೆ ಕೊರೋನಾ ನಿಯಮಗಳ ಸ್ಪಷ್ಟನೆ ಉಲ್ಲಂಘನೆಯಾಗಿದೆ ಅನ್ನುವುದು ಸ್ಪಷ್ಟ. ಇನ್ನು ಅಲ್ಲಿ ಸೇರಿರುವ ಜನಸಂಖ್ಯೆ ನೋಡಿದರೆ ಅಕ್ಕ ಪಕ್ಕದ ನಾಲ್ಕು ಮನೆಯವರು ಸೇರಿದ ಕಾರ್ಯಕ್ರಮವಾಗಿರಲು ಸಾಧ್ಯವಿಲ್ಲ.
ಒಟ್ಟಿನಲ್ಲಿ ಇಡೀ ಮೆಹಂದಿ ಕಾರ್ಯಕ್ರಮದಲ್ಲಿ ನಿಯಮಗಳು ಉಲ್ಲಂಘನೆಯಾಗಿದೆ ಅನ್ನುವುದು ಸ್ಪಷ್ಟ. ಆದರೆ ಪಾಪ ಜನಸಾಮಾನ್ಯರು ಏನು ಮಾಡಲು ಸಾಧ್ಯ. ತಮ್ಮ ಫೇಸ್ ಬುಕ್ ಖಾತೆಗಳಲ್ಲಿ ಅವರು ಆಕ್ರೋಶ ಹೊರಹಾಕಬಹುದು ಅಷ್ಟೇ. ಆದರೆ ಇದೇ ಕಾರ್ಯಕ್ರಮ ಜನ ಸಾಮಾನ್ಯನೊಬ್ಬ ಮಾಡಿರುತ್ತಿದ್ರೆ ಜಿಲ್ಲಾಡಳಿತದ ರಿಯಾಕ್ಷನ್ ಇದೇ ರೀತಿ ಇರುತ್ತಿತ್ತಾ.
Discussion about this post