ಕನ್ನಡ ಶಾಲೆಗಳನ್ನು ಸುಧಾರಿಸದಿದ್ದರೆ, ಕನ್ನಡ ಶಾಲೆಗಳು ಮುಚ್ಚಿ ಹೋಗುವುದು ಖಂಡಿತಾ. ಕನ್ನಡ ಶಾಲೆಯ ಶಿಕ್ಷಕರಿಗೆ ಕನ್ನಡ ಬರೆಯಲು ಬರುತ್ತಿಲ್ಲ ಅನ್ನುವ ಆತಂಕಕಾರಿ ವಿಷಯ ಹಲವು ಬಹಿರಂಗಗೊಂಡಿದೆ.
ಇದಕ್ಕೊಂದು ತಾಜಾ ಉದಾಹರಣೆ, ಸಾರ್ವಜನಿಕರ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಟೇಬಲ್ ಗೆ ಬಂದ ಪತ್ರ. ಪತ್ರ ಓದಿದ ಸಿದ್ದಲಿಂಗಯ್ಯ ಒಂದು ಕ್ಷಣ ಏನಾಗುತ್ತಿದೆ ಅನ್ನುವುದನ್ನು ಅರಿಯದಂತಾಗಿದ್ದರು.
ಹುಬ್ಬಳ್ಳಿ ಮಂಟೂರು ರಸ್ತೆಯ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬರು, ಗರ್ಭಿಣಿಯಾಗಿರುವ ಹಿನ್ನಲೆಯಲ್ಲಿ ನಿಯೋಜನೆಯೊಂಡ ಶಾಲೆಯಲ್ಲೇ ಕರ್ತವ್ಯ ಮುಂದುವರಿಸಿ ಎಂದು ಕೋರಿ ಅಧಿಕಾರಿಗೆ ಪತ್ರ ಬರೆದಿದ್ದರು. ಬೇಡಿಕೆ ಏನೋ ಸರಿಯಾಗಿದೆಯೇ ಇದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದ್ದು ಟೀಚರ್ ಅವರ ಕನ್ನಡ ಬರವಣಿಗೆ.
11 ಸಾಲಿನ ಪತ್ರದಲ್ಲಿ 11 ತಪ್ಪುಗಳನ್ನು ಪತ್ತೆ ಹಚ್ಚಿದ ಸಿದ್ದಲಿಂಗಪ್ಪ, ಪ್ರತಿ ಸಾಲಿನಲ್ಲೂ ವಾಕ್ಯ ರಚನೆ ತಪ್ಪಾಗಿದೆ, ಕಾಗುಣಿತ ದೋಷವಿದೆ ಎಂದು ತಪ್ಪುಗಳನ್ನು ಕೆಂಪು ಶಾಯಿಯಿಂದ ಗುರುತಿಸಿದ್ದಾರೆ. ಮಾತ್ರವಲ್ಲದೆ ‘ನನಗೆ ಜನಿಸುವ ಮಗುವಿನ ಭವಿಷ್ಯದ ಚಿಂತೆ ಇದೆ’ ಎಂದು ಟೀಚರ್ ಬರೆದಿರುವ ಸಾಲಿಗೆ ಮೇಜರ್ ಸಿದ್ದಲಿಂಗಯ್ಯ ‘ನನಗೆ ಮಕ್ಕಳ ಭವಿಷ್ಯದ ಚಿಂತೆ ಇದೆ’ ಎಂದು ಬರೆದಿದ್ದಾರೆ.
ಈ ಪತ್ರ ಇದೀಗ ವೈರಲ್ ಆಗಿದೆ. ನಮ್ಮ ಸುದ್ದಿಯ ಆಶಯ ಯಾರನ್ನೂ ಮೂದಲಿಸುವುದಲ್ಲ, ಬದಲಾಗಿ ಇಂದಿನ ಮಕ್ಕಳನ್ನು ಮುಂದಿನ ಜನಾಂಗವಾಗಿ ರೂಪಿಸುವ ಶಿಕ್ಷಕರು ಎಚ್ಚರಗೊಳ್ಳಲಿ. ಉತ್ತಮ ಪ್ರಜೆಗಳನ್ನು, ಕನ್ನಡವನ್ನು ಪ್ರೀತಿಸುವ, ಸರಿಯಾಗಿ ಬರೆಯುವ ಮಕ್ಕಳನ್ನು ಬೆಳೆಸಲಿ ಅನ್ನುವುದೇ ನಮ್ಮ ಆಶಯ.