ತಿರುಪತಿ ಮಾದರಿಯಲ್ಲೇ ಕರ್ನಾಟಕದಲ್ಲೂ ವೆಂಕಟೇಶ್ವರನ ದೇವಸ್ಥಾನ ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಇಚ್ಛೆ ವ್ಯಕ್ತಪಡಿಸಿತ್ತು. ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದ ಟಿಟಿಡಿ 15ರಿಂದ 25 ಎಕರೆಯಷ್ಟು ಜಮೀನು ನೀಡುವಂತೆ ಮಂಡಳಿಯು ಸರ್ಕಾರಕ್ಕೆ ಮನವಿ ಮಾಡಿತ್ತು. ಜೊತೆಗೆ ಬೆಂಗಳೂರು–ಹೆದ್ದಾರಿ ಬದಿಯಲ್ಲಿಯೇ ಜಮೀನು ಬೇಕು ಎಂದು ಷರತ್ತು ಬೇರೆ ಹಾಕಿತ್ತು.
ಹೀಗಾಗಿ ಬೆಂಗಳೂರಿಗೆ ಅತಿ ಸಮೀಪದಲ್ಲಿ ಇರುವ ರಾಮನಗರ ಜಿಲ್ಲೆಯಲ್ಲಿ ಜಮೀನು ಮಂಜೂರು ಮಾಡುವಂತೆ ಕೋರಿತ್ತು. ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ರಾಮನಗರ ತಾಲೂಕಿನ ಕೂಟಗಲ್, ಬಿಡದಿ ಮೊದಲಾದ ಕಡೆಗಳಲ್ಲಿ ಮೂರು ಜಾಗವನ್ನು ತೋರಿಸಿದ್ದರು, ಅದು ಟಿಟಿಡಿಗೆ ಹಿಡಿಸಿರಲಿಲ್ಲ. ಆ ಬಳಿಕ ಈ ಬಗ್ಗೆ ಆಸಕ್ತಿ ವಹಿಸಿದ ಆಗಿನ ಸಿಎಂ ಕುಮಾರಸ್ವಾಮಿ ತಾವು ಪ್ರತಿನಿಧಿಸುವ ಜಿಲ್ಲೆಯಲ್ಲಿ ಜಾಗ ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಕಂದಾಯ ಇಲಾಖೆ ಅಧಿಕಾರಿಗಳು ಮತ್ತಷ್ಟು ಕಡೆ ಹುಡುಕಿ ಸರ್ಕಾರಿ ಜಾಗವನ್ನು ಪಟ್ಟಿ ಮಾಡಿ ಕೊಟ್ಟರು.ಅದು ಕೂಡಾ ಟಿಟಿಡಿಗೆ ಒಪ್ಪಿಗೆಯಾಗಲಿಲ್ಲ. ಇದೀಗ ಮೈತ್ರಿ ಸರ್ಕಾರ ಪತನಗೊಂಡಿದೆ. ಟಿಟಿಡಿಗೆ ಜಾಗ ಹುಡುಕುವ ಕಾರ್ಯ ಸ್ಥಗಿತಗೊಂಡಿದೆ. ಇನ್ನು ಅಧಿಕಾರಿಗಳ ಪ್ರಕಾರ ಹೆದ್ದಾರಿ ಬದಿಯಲ್ಲಿ ಟಿಟಿಡಿ ಬೇಡಿಕೆ ಇಷ್ಟು ಪ್ರಮಾಣದಲ್ಲಿ ಭೂಮಿ ಲಭ್ಯವಿಲ್ಲ. ಬೇರೆ ಕಡೆ ಜಮೀನುಗಳನ್ನು ಟಿಟಿಡಿ ಒಪ್ಪುವುದಿಲ್ಲ. ಕೆಲವು ಕಡೆ ಜಮೀನು ಇದೆ ಅದಕ್ಕೆ, ಅರಣ್ಯ ಇಲಾಖೆ ತಗಾದೆ ತೆಗೆದಿದೆ. ಹೀಗಾಗಿ ಜಮೀನು ಹುಡುಕಲು ಸಾಧ್ಯವಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ಕೈ ಚೆಲ್ಲಿದ್ದಾರೆ.
ಈಗ ಸಿಎಂ ಯಡಿಯೂರಪ್ಪ ಈ ಕಡತದ ಬಗ್ಗೆ ಗಮನ ವಹಿಸಿ ಶಿವಮೊಗ್ಗದಲ್ಲಿ ಮತ್ತೊಂದು ತಿರುಪತಿ ಕಟ್ಟಿಸಿದ್ದರೂ ಅಚ್ಚರಿ ಇಲ್ಲ.
Discussion about this post