ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ತಮಿಳು ನಟ ವಿವೇಕ್ ಶನಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. 59 ವರ್ಷದ ವಿವೇಕ್ ಅವರು ಶುಕ್ರವಾರ ಅರೆ ಪ್ರಜಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರವಷ್ಟೇ ಅವರು ಕೊರೋನಾ ಲಸಿಕೆ ಪಡೆದಿದ್ದರು.
ಈ ನಡುವೆ ವಿವೇಕ್ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ತಿಳಿಸಿದ್ದಾರೆ.
ವಿವೇಕ್ ಅವರ ಆರೋಗ್ಯ ಸ್ಥಿತಿ ಕುರಿತಂತೆ ಮಾಹಿತಿ ನೀಡಿರುವ ಸಿಐಎಂಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ ಶಿವಸ್ವಾಮಿ, ವಿವೇಕ್ ಅವರ ಎಡ ಅಪಧಮನಿಯಲ್ಲಿ ಶೇಕಡ 100% ರಷ್ಟು ರಕ್ತ ಹೆಪ್ಪುಗಟ್ಟಿತ್ತು, ಇನ್ನು ವಿವೇಕ್ “ವೆಂಟ್ರಿಕ್ಯುಲರ್ ಫೈಬ್ರಿಲೇಷನ್” ಎಂಬ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿದೆ ಅಂದಿದ್ದರು.
ವಿವೇಕ್ ಅವರನ್ನು ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಇದೇ ಬಾಲಚಂದರ್ ರಜಿನಿಕಾಂತ್ ಅವರನ್ನು ಕೂಡಾ ಚಿತ್ರರಂಗಕ್ಕೆ ಕರೆ ತಂದಿದ್ದರು.
ತಮಿಳು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ವಿವೇಕ್, 80ರ ದಶಕದಲ್ಲಿ ತಮಿಳು ಚಿತ್ರರಂಗದ ದೊಡ್ಡ ಹಾಸ್ಯ ನಟನಾಗಿ ಹೊರ ಹೊಮ್ಮಿದರು. ಅದೆಷ್ಟರ ಮಟ್ಟಿಗ ವಿವೇಕ್ ಪ್ರಸಿದ್ದಿಯನ್ನು ಪಡೆದರು ಅಂದ್ರೆ ಚಿತ್ರದ ಪೋಸ್ಟರ್ ಗಳಲ್ಲಿ ಅವರ ಮುಖವು ಮುದ್ರಣವಾಗತೊಡಗಿತು. ನಾಯಕ ನಟನೊಂದಿಗೆ ಹಾಸ್ಯನಟನ ಮುಖ ಕೂಡಾ ಕಾಣಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟ ಹಿರಿಮೆ ವಿವೇಕ್ ಅವರದ್ದು.
ಕಾಲೇಜು ದಿನಗಳಲ್ಲಿ ಸ್ಟಾಂಡಪ್ ಕಮಿಡಿಯನ್ ಆಗಿದ್ದ ವಿವೇಕ್, ಅದನ್ನೇ ಕೆಲ ಸಮಯ ಉದ್ಯೋಗವನ್ನಾಗಿಸಿದ್ದರು. ಬಳಿಕ ರಾಜ್ಯ ಸರ್ಕಾರದ ಇಲಾಖೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ವಿವೇಕ್ ಅವರನ್ನು ಕೈ ಬೀಸಿ ಕರೆದಿದ್ದು ಚಿತ್ರರಂಗ. 1987ರಲ್ಲಿ ಕೆ ಬಾಲಚಂದರ್ ತಮ್ಮ ಚಿತ್ರವೊಂದರಲ್ಲಿ ಬಣ್ಣ ಹಚ್ಚಲು ಅವಕಾಶ ಮಾಡಿಕೊಟ್ಟರು.
ತಮ್ಮ ಚಿತ್ರರಂಗದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ವಿವೇಕ್, ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.
ವಿಧಿಯಾಟ ಅಂದ್ರೆ 2015ರಲ್ಲಿ ವಿವೇಕ್ ತಮ್ಮ ಪುತ್ರ ಪ್ರಸನ್ನ ಕುಮಾರ್ ಅವರನ್ನು ಡೇಂಘಿ ಜ್ವರದ ಕಾರಣದಿಂದ ಕಳೆದುಕೊಂಡಿದ್ದರು.
Discussion about this post