ಐತಿಹಾಸಿಕ ಅಯೋಧ್ಯೆ ತೀರ್ಪು ಹೊರ ಬಿದ್ದಿದೆ. ಇಡೀ ರಾಷ್ಟ್ರವೇ ಸರ್ವ ಸಮ್ಮತವಾಗಿ ತೀರ್ಪನ್ನು ಒಪ್ಪಿಕೊಂಡಿದ್ದು, ದೇಶದ ಪರಮೋಚ್ಛ ನ್ಯಾಯಾಲಯ ನೀಡಿರುವು ತೀರ್ಪನ್ನು ಭಾರತೀಯರು ತಲೆ ಬಾಗಿ ಗೌರವಿಸಿದ್ದಾರೆ.
ಈ ನಡುವೆ ಈ ತೀರ್ಪಿಗೂ ಕರಾವಳಿಗೂ ನಂಟಿದೆ ಅನ್ನುವ ಅಂಶ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬ್ರಿ ಮಸೀದಿ ಪರ ವಾದ ನಡೆಸಿದ ವಕೀಲರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ಅಬ್ದುಲ್ ರಹಿಮಾನ್ ಕೂಡಾ ಸೇರಿದ್ದಾರೆ.
ಉಪ್ಪಿನಂಗಡಿ ಹಿರೇಬಂಡಾಡಿ ನಿವಾಸಿ ದಿ. ಇಸುಬು ಬ್ಯಾರಿ ಹಾಗೂ ಆಮಿನಮ್ಮ ದಂಪತಿಗಳ ಪುತ್ರ ಅಬ್ದುಲ್ ರಹಿಮಾನ್. ಇವರು ಪುತ್ತೂರಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಡೆಸುವ ಮೂಲಕ ತನ್ನ ವೃತ್ತಿಯನ್ನು ಆರಂಭಿಸಿದ್ದರು. ಆ ಬಳಿಕ ಸರ್ವೋಚ್ಛ ನ್ಯಾಯಾಲಯದ ವಕೀಲರಾಗಿ ಸೇವೆ ಅರಂಭಿಸಿದ್ದರು.
ಬಾಬರಿ ಮಸೀದಿ ಪರ ಹಕ್ಕು ಪ್ರತಿಪಾದಿಸಿದ್ದ ಸುನ್ನಿ ವಕ್ಫ್ ಮಂಡಳಿ ತನ್ನ ಪರ ವಾದ ಮಾಡುವ ಸಲುವಾಗಿ ಘಟಾನುಘಟಿ ವಕೀಲರ ತಂಡವನ್ನು ಆಯ್ಕೆಮಾಡಿತ್ತು. ಈ ಪೈಕಿ ಉಪ್ಪಿನಂಗಡಿಯ ಅಬ್ದುಲ್ ರಹಿಮಾನ್ ಕೂಡಾ ಸೇರಿದ್ದರು.
ಪಂಚಪೀಠದ ಸದಸ್ಯರಲ್ಲಿ ಒಬ್ಬರಾಗಿರುವ ನ್ಯಾ. ಅಬ್ದುಲ್ ನಜೀರ್ ಕರಾವಳಿಯವರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಸಮೀಪದ ಬೆಳುವಾಯಿ ಅವರ ಹುಟ್ಟೂರು. ಜ. 5, 1958ರಲ್ಲಿ ಹುಟ್ಟಿದ ಇವರು ಪ್ರಾಥಮಿಕ ಶಿಕ್ಷಣ ಮುಗಿಸಿ ಆ ಬಳಿಕ ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು. ಆ ಬಳಿಕ ನಂತರ ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಅಭ್ಯಾಸಿಸಿದ್ದರು.
1983ರಲ್ಲಿ ಅಬ್ದುಲ್ ನಜೀರ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ತಮ್ಮ ವಕೀಲಗಾರಿಕೆಯ ಅಭ್ಯಾಸ ಆರಂಭಿಸಿದರು. 2003ರವರೆಗೆ ಕರ್ನಾಟಕದ ಹೈಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 2003ರಲ್ಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿ ಆಯ್ಕೆಯಾದ ಇವರು 2017ರಲ್ಲಿ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ನೇಮಕವಾಗಿದ್ದರು.
ಅಂದ ಹಾಗೇ ಐತಿಹಾಸಿಕ ತ್ರಿವಳಿ ತಲಾಖ್ ಪ್ರಕರಣದ ಪಂಚ ಸದಸ್ಯ ಪೀಠದಲ್ಲೂ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.
Discussion about this post