ನವದೆಹಲಿ : ಕೊರೋನದಂತಹ ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನವಿಗಳನ್ನು ಜನ ಹಂಚಿಕೊಂಡಾಗ ಅಂತವರ ವಿರುದ್ಧ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಈ ಮೂಲಕ ಯೋಗಿ ಆದಿತ್ಯನಾಥ್ ಕೈಗೊಂಡ ಸಂವಿಧಾನ ವಿರೋಧಿ ಕ್ರಮಕ್ಕೆ ಸರಿಯಾಗಿ ಚಾಟಿ ಬೀಸಿದೆ.
ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಅದನ್ನು ಬಿಟ್ಟು ಮನವಿ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಹಾಗೇನಾದ್ರೂ ಮಾಡಿದ್ರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ಸಾಮಾಜಿಕ ಜಾಲ ತಾಣದಲ್ಲಿ ನೆರವು ಕೋರುವ ಅಥವಾ ಇತರ ದೂರುಗಳ ಬಗ್ಗೆ ಮನವಿ ಮಾಡಿದರೆ ಅಂತವರ ವಿರುದ್ದ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರಗಳು FIR ದಾಖಲು ಮಾಡಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ಯುವಕನೊಬ್ಬ ಟ್ವೀಟ್ ಮಾಡಿ, ತನ್ನ ತಾತ ಸಂಕಷ್ಟ ಸ್ಥಿತಿಯಲ್ಲಿದ್ದಾರೆ, ಅವರಿಗೆ ಆಕ್ಸಿಜನ್ ವ್ಯವಸ್ಥೆಯಾಗಬೇಕಿದೆ ದಯವಿಟ್ಟು ಒದಗಿಸಿ ಎಂದು ಮನವಿ ಮಾಡಿದ್ದರು. ಈ ಟ್ವೀಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಯೋಗಿ ಸರ್ಕಾರ ಆ ಯುವಕ ವಿರುದ್ಧ ವಿವಿಧ ಕಠಿಣ IPC ಕಾಯ್ದೆಗಳ ಪ್ರಕಾರ FIR ದಾಖಲಿಸಿಕೊಂಡಿತ್ತು. ಅಮೇಠಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣದ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಇದೇ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿರುವ ಸುಪ್ರೀಂಕೋರ್ಟ್, ಜನರ ಜೀವ ಉಳಿಸುವ ಕಾರ್ಯ ಮೊದಲು ಮಾಡಿ ಎಂದು ಸೂಚಿಸಿದೆ. ದೇಶದಲ್ಲಿ ಆರೋಗ್ಯ ವ್ಯವಸ್ಥೆ ಸರಿಯಿಲ್ಲದಿರುವ ಕಾರಣದಿಂದ ಕೊರೋನ ಸೋಂಕಿನಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ 20 ವರ್ಷಗಳಿಂದ ನೀವು ಮಾಡುತ್ತಿದ್ರಿ ಅನ್ನುವುದೇ ಗೊತ್ತಾಗುತ್ತಿಲ್ಲ, ಆಮ್ಲಜನಕ ಸೇರಿದಂತೆ ವೈದ್ಯಕೀಯ ಸೌಲಭ್ಯ ಅನೇಕ ರಾಜ್ಯಗಳಲ್ಲಿ ಸಿಗದಿರುವುದನ್ನು ನ್ಯಾಯ ಪೀಠ ಗಮನಿಸಿದೆ. ಇದೊಂದು ಕಳವಳಕಾರಿ ಸಂಗತಿಯಾಗಿದ್ದು, ನ್ಯಾಯಪೀಠ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದೆ.
Discussion about this post