ಸುದೀಪ್ ಹಾಗೂ ದರ್ಶನ್ ವಿಚಾರದಲ್ಲಿ ತಪ್ಪು ಸುದ್ದಿಯೊಂದನ್ನು ಬಿಟಿವಿ ಪ್ರಸಾರ ಮಾಡಿದೆ ಅನ್ನುವ ಆಕ್ರೋಶ ಕೇಳಿ ಬಂದಿದೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಿದ್ದ ದರ್ಶನ್ ಅವರನ್ನು ವರದಿಗಾರ್ತಿಯೊಬ್ಬರು ಸುದೀಪ್ ಹಾಗೂ ದರ್ಶನ್ ಅವರ ಸಂಬಂಧ ಕುರಿತಂತೆ ಪ್ರಶ್ನೆ ಕೇಳಿದ್ದಾರೆ.
ಈ ವೇಳೆ ಕೋಪಗೊಂಡ ದರ್ಶನ್ ಮಾಧ್ಯಮವನ್ನೇ ಟಾರ್ಗೇಟ್ ಮಾಡಿ ಮಾತನಾಡಿದ್ದಾರೆ. ಹೆಂಡತಿ ಪಕ್ಕ ಮಲಗಬೇಕಾ ಬೇಡವಾ ಅನ್ನೋದನ್ನ ನೀವು ಡಿಸೈಡ್ ಮಾಡ್ತೀರಾ. ಯಾರ ಪೋನ್ ಸ್ವೀಕರಿಸಬೇಕು, ಸ್ವೀಕರಿಸಬಾರದು, ಯಾರ ಜೊತೆಗೆ ಗೆಳೆತನ ಮಾಡಬೇಕು, ಮಾಡಬಾರದು ಅನ್ನುವುದನ್ನು ಮಾಧ್ಯಮಗಳು ಡಿಸೈಡ್ ಮಾಡಬೇಕಾ ಎಂದು ಕೇಳಿದ್ದಾರೆ.
ಆದರೆ ಬಿಟಿವಿ ಮಾತ್ರ ಇದನ್ನು ಸುದೀಪ್ ಅವರಿಗೆ ಥಳುಕು ಹಾಕಿದೆ. ಇದು ಕನ್ನಡ ಚಿತ್ರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಬಿಟಿವಿಯನ್ನು ಅವರದ್ದೇ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ದರ್ಶನ್ ಎಲ್ಲೂ ಕೂಡಾ ಸುದೀಪ್ ಬಗ್ಗೆ ಒಂದು ಅಕ್ಷರವನ್ನೂ ಮಾತನಾಡಿಲ್ಲ. ಆದರೆ ಅದ್ಯಾಕೆ ಮಾಧ್ಯಮಗಳು ಅವರ ನಡುವೆ ಹುಳಿ ಹಿಂಡುತ್ತಿದೆ ಅನ್ನುವುದೇ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ ಅಭಿಮಾನಿಗಳು.
Discussion about this post