ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರಾದ ವೀರಾಪುರದ ಗ್ರಾಮವನ್ನು ಪಾರಂಪರಿಕ ಹಾಗೂ ವಿಶ್ವದರ್ಜೆಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಈಗಾಗಲೇ ₹ 25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶ್ರೀಗಳು 111 ವರ್ಷ ಜೀವಿಸಿ ಸಮಾಜದ ಒಳಿತಿಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ಅದರ ಸವಿನೆನಪಿಗಾಗಿ ಇಲ್ಲಿ ಶ್ರೀಗಳ 111 ಅಡಿ ಎತ್ತರದ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಇದರೊಟ್ಟಿಗೆ ಗ್ರಾಮದಲ್ಲಿ ಇನ್ನೂ ಹತ್ತು ಹಲವು ಯೋಜನೆಗಳಿಗೆ ಇದೇ ಸಂದರ್ಭ ಚಾಲನೆ ದೊರೆಯಲಿದೆ.
ಶಿವಗಂಗೆ ಬೆಟ್ಟವು ಶಿವಕುಮಾರ ಶ್ರೀಗಳ ನೆಚ್ಚಿನ ತಾಣ. ಅದಕ್ಕೆ ಅಭಿಮುಖವಾಗಿಯೇ ಅವರು ತಪಸ್ಸು ಮಾಡುತ್ತಿದ್ದರು ಎನ್ನುವ ಪ್ರತೀತಿ ಇದೆ. ಹೀಗಾಗಿ ಬೆಟ್ಟಕ್ಕೆ ಅಭಿಮುಖವಾಗಿಯೇ ಶ್ರೀಗಳ ಪ್ರತಿಮೆ ತಲೆ ಎತ್ತಲಿದೆ. ಇಲ್ಲಿ ನಿರ್ಮಾಣ ಆಗಲಿರುವ 111 ಅಡಿ ಎತ್ತರದ ಪ್ರತಿಮೆಯು ರಾಜ್ಯದಲ್ಲಿಯೇ ಎರಡನೇ ಅತಿ ಎತ್ತರದ ಪ್ರತಿಮೆ ಆಗಲಿದೆ. ಗದಗದ ಭೀಷ್ಮ ಕೆರೆ ಅಂಗಳದಲ್ಲಿ ಬಸವೇಶ್ವರರ 116 ಅಡಿ ಎತ್ತರದ ಪ್ರತಿಮೆ ಈಗಾಗಲೇ ನಿರ್ಮಾಣ ಆಗಿದೆ.
ವೀರಾಪುರದಲ್ಲಿ ನಿರ್ಮಾಣ ಆಗಲಿರುವ ಪ್ರತಿಮೆಗೆ 30 ಅಡಿ ಎತ್ತರದ ಬಂಡೆಯಾಕಾರದ ತಳಪಾಯ ಕಟ್ಟಲಾಗುತ್ತದೆ. ಅದರ ಮೇಲೆ ಊರುಗೋಲು ಹಿಡಿದುಕೊಂಡಿರುವ ಕಾವಿದಾರಿ ಶ್ರೀಗಳ ಬೃಹತ್ ಪ್ರತಿಮೆ ಇರಲಿದೆ. ತಳಪಾಯದಲ್ಲಿ ಸಭಾಭವನ, ವಸ್ತು ಸಂಗ್ರಹಾಲಯ, ಧ್ಯಾನ ಕೊಠಡಿ ಇರಲಿವೆ.
ವಸ್ತು ಸಂಗ್ರಹಾಲಯದಲ್ಲಿ ಶ್ರೀಗಳ ಜೀವನವನ್ನು ತೋರಿಸುವ ಧ್ವನಿ ಬೆಳಕಿನ ಪ್ರಚಾರ ಇರಲಿದೆ. ಭಕ್ತರ ವಿಶ್ರಾಂತಿಗೆ ಆಸನಗಳು ಇರಲಿವೆ.
ಸಂಪೂರ್ಣವಾಗಿ ಕಾಂಕ್ರೀಟ್ ನಿರ್ಮಿತವಾಗಲಿರುವ ಪ್ರತಿಮೆಯು ಮಳೆ, ಬಿರುಗಾಳಿ, ಭೂಕಂಪನದಂತಹ ಪ್ರಕೃತಿ ವಿಕೋಪ ತಾಳಿಕೊಳ್ಳುವ ಶಕ್ತಿ ಹೊಂದಿದೆ. ಶ್ರೀಗಳ ಪ್ರತಿಮೆ ನಿರ್ಮಾಣ ಜವಾಬ್ದಾರಿಯನ್ನು ಪಿಎಸ್ಎಪಿ ಆರ್ಕಿಟೆಕ್ಟ್ ಕಂಪನಿಗೆ ನೀಡಲಾಗಿದೆ. ಈ ಸಂಸ್ಥೆಯು ಹಿಂದೆ ಗದಗದಲ್ಲಿ ಬಸವೇಶ್ವರರ ಪ್ರತಿಮೆ ಹಾಗೂ ಮಹದೇಶ್ವರ ಬೆಟ್ಟದಲ್ಲಿನ ಮಹದೇಶ್ವರ ಪ್ರತಿಮೆ ನಿರ್ಮಾಣ ಮಾಡಿದ ಅನುಭವ ಹೊಂದಿದೆ. ಎರಡೂವರೆ ವರ್ಷದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ವೀರಾಪುರ ಗ್ರಾಮದಲ್ಲಿ ಶ್ರೀಗಳ ಪೂರ್ವಾಶ್ರಮದ ತಂದೆ ಮತ್ತು ತಾಯಿ ಸಮಾಧಿ ಇದ್ದು, ಇದರ ಬಳಿಯೇ ಶ್ರೀಗಳ ದೇವಾಲಯ ಸಹ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ಮತ್ತೆ 2 ದೇಗುಲ ತಲೆ ಎತ್ತಲಿವೆ.
Discussion about this post