ಬೆಂಗಳೂರು : ಶಿವಮೊಗ್ಗದ ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಲಂಚ ಬಾಕತನಕ್ಕೆ ಅಮಾಯಕ ಜೀವಗಳು ಬಲಿಯಾಗಿದೆ ಎನ್ನಲಾಗಿದೆ.
ಈಗಾಗಲೇ ಘಟನೆ ಕುರಿತಂತೆ ಮಾತನಾಡಿರುವ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಜಿಲ್ಲಾಡಳಿತ ಸೇರಿದಂತೆ ಪೊಲೀಸ್ ಮತ್ತು ಗಣಿಗಾರಿಕೆ ಇಲಾಖೆಗಳೇ ಈ ದುರಂತಕ್ಕೆ ಹೊಣೆ ಅಂದಿದ್ದಾರೆ.
ಮಾತ್ರವಲ್ಲದೆ ಜಿಲ್ಲೆಯಲ್ಲಿ ಇಂತಹ ನೂರಾರು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಆದರೆ ಅಧಿಕಾರಿಗಳು ಲಂಚದ ಆಸೆಗೆ ಬಿದ್ದು ಮೌನವಾಗಿದ್ದಾರೆ ಎಂದು ದೂರಿದ್ದಾರೆ. ಜೊತೆಗೆ ಅಕ್ರಮ ಮರಳುಗಾರಿಕೆ ದಂಧೆಯೂ ಜಿಲ್ಲೆಯಲ್ಲಿ ಅವ್ಯಾಹತವಾಗಿದೆ ಎಂದು ಆಯನೂರು ಹೇಳಿದ್ದಾರೆ.
ಪ್ರತಿ ಪಕ್ಷ ನಾಯಕರು ಇಂತಹುದೊಂದು ಆರೋಪ ಮಾಡಿದ್ರೆ ಅದೊಂದು ರಾಜಕೀಯ ಹೇಳಿಕೆ ಅನ್ನಬಹುದಿತ್ತು, ಆದರೆ ಬಿಜೆಪಿ ಪಕ್ಷದ ಮುಖಂಡರೇ ಹೇಳಿಕೆ ಕೊಟ್ಟಿದ್ದಾರೆ ಅಂದ ಮೇಲೆ ಅಧಿಕಾರಿಗಳು ತಿಂದು ತೇಗುತ್ತಿದ್ದಾರೆ ಅನ್ನುವುದು ಸ್ಪಷ್ಟ.
ದುರಂತ ಅಂದ್ರೆ ಶಿವಮೊಗ್ಗ ಹೇಳಿ ಕೇಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರು. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಅಕ್ರಮ ದಂಧೆಗಳು ರಾಜರೋಷವಾಗಿ ನಡೆಯುತ್ತಿದೆ ಅಂದ್ರೆ ಬೇರೆ ಜಿಲ್ಲೆಯ ಕಥೆ ಏನಾಗಿರಬೇಡ. ತಮ್ಮ ಜಿಲ್ಲೆಯ ಅಕ್ರಮ ಗಣಿಗಾರಿಕೆ, ಅಕ್ರಮ ಮರಳುಗಾರಿಕೆಗಳನ್ನು ತಡೆಯಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಿಲ್ಲ. ಇನ್ನು ಬೇರೆ ಜಿಲ್ಲೆಗಳ ಅಕ್ರಮಗಳ ಬಗ್ಗೆ ಮಾತನಾಡುವುದೇ ಬೇಡ.
ಇನ್ನು ಕೇವಲ ಯಡಿಯೂರಪ್ಪ ಒಬ್ಬರೇ ಅಲ್ಲ, ಅಲ್ಲಿ ಸಂಸದರಾಗಿರುವವರು ಯಡಿಯೂರಪ್ಪನವರ ಪುತ್ರ ಅವರಾದರೂ ಅಕ್ರಮಗಳಿಗೆ ಕಡಿವಾಣ ಹಾಕಬಹುದಿತ್ತು. ಪ್ರತಿ ಪಕ್ಷಗಳಿಂದ ಶ್ಯಾಡೋ ಸಿಎಂ ಎಂದು ಟೀಕೆಗೆ ಒಳಗಾಗಿರುವ ವಿಜಯೇಂದ್ರ ಕೂಡಾ ಅಕ್ರಮಗಳ ಬಗ್ಗೆ ದನಿ ಎತ್ತಬಹುದಿತ್ತು. ಆದರೆ ಹಾಗಾಗಿಲ್ಲ ಅಂದ ಮೇಲೆ ಇನ್ನು ನಿರೀಕ್ಷಿಸುವುದು ಏನಿದೆ.
ಶಿವಮೊಗ್ಗದ ದುರ್ಘಟನೆಯ ನಂತರ ಇನ್ನು ಕೆಲವು ದಿನಗಳ ಕಾಲ ಅಧಿಕಾರಿಗಳು ಅಕ್ರಮ ಅಡ್ಡೆಗಳ ಮುಗಿ ಬೀಳುತ್ತಾರೆ.
ಒಂದು ತಿಂಗಳು ಕಳೆದರೆ ಬೇಲ್ ತೆಗೆದುಕೊಂಡು ಎಲ್ಲರೂ ಹೊರಗೆ ಬರುತ್ತಾರೆ, ಮತ್ತೆ ‘ಅಕ್ರಮ’ ಸದ್ದಿಲ್ಲದೆ ಕೆಲಸ ಪ್ರಾರಂಭಿಸುತ್ತದೆ. ಅಧಿಕಾರಿಗಳು ಕಣ್ಣಿದ್ದು ಕುರುಡರಾಗುತ್ತಾರೆ, ಕಿವಿಯಿದ್ದು ಕಿವುಡರಾಗಿರುತ್ತಾರೆ.
Discussion about this post