ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಇನ್ನೂ ಮುಂದುವರಿದಿದೆ. ರಾಜ್ಯ ಸರ್ಕಾರದ ಲೆಕ್ಕದಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ. ಅಪಾಯವನ್ನು ಎದುರಿಸಲು ಬೇಕಾದ ಸಕಲ ವ್ಯವಸ್ಥೆಗಳು ಸಿದ್ದವಾಗಿದೆ. ಆದರೆ ಅವೆಲ್ಲವೂ ಬರೀ ಪೇಪರ್ ಗಳಲ್ಲಿ ಮಾತ್ರ ಇದೆ.
ಈಗಾಗಲೇ ಎರಡನೇ ಅಲೆಯಲ್ಲಿ ರಾಜ್ಯದ ಮಹಾನಗರಗಳು ಹೇಗೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿತು ಅನ್ನುವುದನ್ನು ನೋಡಿದ್ದೇವೆ. ತಜ್ಞರ ಸಲಹೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಜನ ಹೀಗೆ ಬೀದಿಯಲ್ಲಿ ಇಂದಿಗೂ ನರಳಾಡುತ್ತಿದ್ದಾರೆ. ಇದೀಗ ಸೋಂಕು ಇಳಿದಿದೆ ಅನ್ನುವುದನ್ನು ತೋರಿಸುವ ಸಲುವಾಗಿ ಟೆಸ್ಟಿಂಗ್ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲಾಗಿದೆ.
ಈ ನಡುವೆ ಸಿಟಿಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾದರೂ, ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಏರತೊಡಗಿದೆ. ಒಂದು ವೇಳೆ ಪರೀಕ್ಷೆ ಮಾಡಿದರೆ ಪ್ರತೀ ಹಳ್ಳಿಯ ಮನೆಗಳಲ್ಲೂ ಸೋಂಕಿತರು ಖಂಡಿತಾ ಸಿಗುತ್ತಾರೆ. ಜೊತೆಗೆ ಮುಂದಿನ ವಾರದ ಹೊತ್ತಿಗೆ ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಆಕ್ಸಿಜನ್ ಸಮಸ್ಯೆ, ಬೆಡ್ ಸಮಸ್ಯೆ ಸೃಷ್ಟಿಯಾಗಲಿದೆ.
ಇಂತಹ ಸಮಸ್ಯೆ ಮುಂದೊಂದು ದಿನ ಬರಲಿದೆ ಅನ್ನುವುದನ್ನು ಅರಿತಿರುವ ಐಪಿಎಸ್ ಅಧಿಕಾರಿಯೊಬ್ಬರು ಸದ್ದಿಲ್ಲದೆ ಹಳ್ಳಿಗಳಿಗೆ ಆಕ್ಸಿಜನ್ ಪೂರೈಕೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಯಾವಾಗ ಆಕ್ಸಿಜನ್ ಸಮಸ್ಯೆ ತೀವ್ರವಾಯ್ತೋ, ದೂರಾಲೋಚನೆ ಮಾಡಿದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಹಳ್ಳಿಗಳಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಬದಲಾಗಿ Oxygen Concentrator ಗಳೇ ಹಳ್ಳಿಗರ ಜೀವ ಉಳಿಸಬಲ್ಲುದು ಅನ್ನುವುದನ್ನು ನಿರ್ಧರಿಸಿದರು.
ಹೀಗಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ Oxygen Concentrator ಸಲುವಾಗಿ ಮನವಿ ಮಾಡಿದರು. ವಿದೇಶದಲ್ಲಿರುವ ಸ್ನೇಹಿತರ ಸಹಾಯ ಕೋರಿದರು. ತಮ್ಮ ವ್ಯಾಪ್ತಿಗೆ ಬರೋ ಠಾಣೆಗಳಿಗೆ ಮನವಿ ಮಾಡಿಕೊಂಡರು. ತಮ್ಮ ಠಾಣಾ ವ್ಯಾಪ್ತಿಯ ಸಂಸ್ಥೆ, ಉದ್ಯಮಿಗಳನ್ನು ಸಂಪರ್ಕಿಸಿ Oxygen Concentrator ಖರೀದಿಗೆ ಪ್ರೋತ್ಸಾಹಿಸಿದರು. ಈ ಮೂಲಕ ಇದೀಗ 50ಕ್ಕೂ ಹೆಚ್ಚು Oxygen Concentrator ಗಳನ್ನು ಖರೀದಿಸಲಾಗಿದ್ದು, ಜಿಲ್ಲಾ ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರಿಸಲಾಗಿದೆ.
ಮುಂದಿನ ದಿನಗಳಲ್ಲಿ ಮತ್ತೆ 100ಕ್ಕೂ ಹೆಚ್ಚು Oxygen Concentrator ಖರೀದಿಗೆ ನಿರ್ಧರಿಸಲಾಗಿದ್ದು, ಕರ್ನಾಟಕದ ಹಳ್ಳಿಗಳಲ್ಲಿ ಇರೋ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇವುಗಳನ್ನು ತಲುಪಿಸಲಾಗುತ್ತದೆ. ಈ ಮೂಲಕ ಗ್ರಾಮ ಭಾರತದ ಮಂದಿಗೆ ಉಸಿರು ನೀಡುವ ಕೆಲಸವನ್ನು ಸೀಮಂತ್ ಕುಮಾರ್ ಸಿಂಗ್ ಮಾಡುತ್ತಿದ್ದಾರೆ.
Discussion about this post