ಬಿಜೆಪಿ ನಮ್ಮ ಓರ್ವ ಶಾಸಕರನನ್ನು ಸೆಳೆದು ನೋಡಲಿ, ನಾವು ಕೌಂಟರ್ ಕೊಡುತ್ತೇವೆ. ಅದಕ್ಕೆ ನಾವು ಸಿದ್ದರಾಗಿದ್ದೇವೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಮಹೇಶ್ ಹೇಳಿಕೆ ನೋಡಿ ನಗುವುದೋ ಅಳುವುದೋ ಎಂದು ಗೊತ್ತಾಗುತ್ತಿಲ್ಲ. ಪ್ರಸ್ತುತ ರಾಜಕೀಯದಲ್ಲಿ ಜೆಡಿಎಸ್ ಗೆ ತನ್ನ ಶಾಸಕರನ್ನು ಉಳಿಸಿಕೊಂಡರೆ ಸಾಕಾಗಿದೆ.ಈಗಾಗಲೇ ಹಲವಾರು ವರ್ಷಗಳಿಂದ ಅಧಿಕಾರವಿಲ್ಲದೆ ಕೂತಿರುವ ಜೆಡಿಎಸ್ ಶಾಸಕರು ಮತ್ತೆ ಎಲ್ಲಿ ನಾವು ಅಧಿಕಾರಿ ಕಳೆದುಕೊಳ್ಳುತ್ತೇವೋ ಅನ್ನುವ ಭೀತಿಯಲ್ಲಿದ್ದಾರೆ.
ಜೊತೆಗೆ ಕೆಲ ಶಾಸಕರಿಗೆ ಈ ಸರ್ಕಾರವೂ ಬೇಕಾಗಿಲ್ಲ. ಕಾಂಗ್ರೆಸ್ ವಿರುದ್ಧ ಹೊಡೆದಾಡಿ ಗೆದ್ದ ಶಾಸಕರು ಮುಂದೆ ತಮ್ಮ ಸೀಟುಗಳಿಗೆ ಎಲ್ಲಿ ಕುತ್ತು ಬರುತ್ತದೋ ಅನ್ನುವ ಆತಂಕದಲ್ಲಿದ್ದಾರೆ ಅನ್ನುವುದು ಮಹೇಶ್ ಅವರಿಗೆ ಅರಿವು ಇದ್ದಂತಿಲ್ಲ.
ಬಿಜೆಪಿಯ 10 ಶಾಸಕರು ನನ್ನ ಸಂಪರ್ಕದಲ್ಲಿರೋ ವಿಷಯ ಜೆಡಿಎಸ್ ವರಿಷ್ಠರಿಗೆ ಗೊತ್ತಿದೆ. ನಾನು ಸಹ 20 ವರ್ಷ ಬಿಜೆಪಿಯಲ್ಲಿ ಇದ್ದವನು. ಹಲವು ಶಾಸಕರು ನನಗೆ ಆತ್ಮೀಯರು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಮಹೇಶ್ ಎಚ್ಚರಿಕೆ ನೀಡಿದ್ದಾರೆ. ಆದರೆ ಇದು ಸದ್ದು ಮಾಡಿ ಹಾವು ಓಡಿಸುವ ಪ್ರಯತ್ನ. ಬಿಜೆಪಿಯಿಂದ ಅದ್ಯಾವ ಶಾಸಕನೂ ಹೊರಗೆ ಕಾಲಿಡಲು ಸಿದ್ದರಿಲ್ಲ. ಜೊತೆಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಅನ್ನುವ ವಿಶ್ವಾಸ ಅವರಲ್ಲಿದೆ.
ಜೆಡಿಎಸ್ ಅಥವಾ ಕಾಂಗ್ರೆಸ್ ಬಿಜೆಪಿ ಶಾಸಕರನ್ನು ಸೆಳೆಯುವುದಿದ್ದರೆ ಯಾವತ್ತೋ ಆ ಕೆಲಸ ಮಾಡಬೇಕಾಗಿತ್ತು. ಜೊತೆಗೆ ಬಿಜೆಪಿಗೆ ಶಾಸಕರು ರಾಜೀನಾಮೆ ಕೊಡ್ತಾರೆ ಅಂದಿಟ್ಟುಕೊಂಡರೂ, ಉಪ ಚುನಾವಣೆಯಲ್ಲಿ ಗೆಲ್ಲಿಸುವ ತಾಕತ್ತು ಯಾರಿಗಿದೆ. ಅದಕ್ಕೆ ಬೇಕಾದ ಸಂಪನ್ಮೂಲ ಯಾರು ಕೊಡ್ತಾರೆ.
ಹೋಗ್ಲಿ ಹೇಗೋ ಬಿಜೆಪಿಗೆ ರಾಜೀನಾಮೆ ಕೊಟ್ಟ ಶಾಸಕರು ಗೆದ್ದು ಬರ್ತಾರೆ ಅಂದುಕೊಳ್ಳೋಣ, ಅವರಿಗೆ ಸಚಿವ ಸ್ಥಾನ ಕೊಡದಿರಲು ಸಾಧ್ಯವೇ. ಸಚಿವ ಸ್ಥಾನ ಕೊಡಲು ಎಲ್ಲಿ ಜಾಗ ಖಾಲಿ ಇದೆ.
Discussion about this post