ಬೆಂಗಳೂರು : ಕಾಳಸಂತೆಯಲ್ಲಿ ರೆಮ್ಟಿಸಿವರ್ ಮಾರಾಟ ಮಾಡಲಾಗುತ್ತಿದೆ ಅನ್ನುವ ಆರೋಪದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ಸಂಜಯನಗರ ಠಾಣೆ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಇದೀಗ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ತನಿಖೆ ನಡೆಸಿ ವರದಿ ಕೊಡುವಂತೆ ಜೆಸಿನಗರ ಉಪವಿಭಾಗದ ರೀನಾ ಸುವರ್ಣ ಅವರಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಇಲಾಖಾ ಮಟ್ಟದ ತನಿಖೆ ಪ್ರಾರಂಭಗೊಂಡಿದೆ.
ಖಾಸಗಿ ಆಸ್ಪತ್ರೆ ವೈದ್ಯ ಡಾ. ನಾಗರಾಜ್ ರೆಮ್ಡಿಸಿವರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಅನ್ನುವ ಆರೋಪದಡಿಯಲ್ಲಿ ಸಂಜಯನಗರ ಇನ್ಸ್ ಪೆಕ್ಟರ್ ಕ್ಯಾತ್ಯಾಯಿನಿ ವಶಕ್ಕೆ ಪಡೆದಿದ್ದರು. ಬಳಿಕ ನನ್ನನ್ನು ಎರಡು ದಿನಗಳ ಕಾಲ ಠಾಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಡಾ. ನಾಗರಾಜ್ ದೂರಿದ್ದಾರೆ. ಜೊತೆಗೆ ನನಗೂ ರೆಮ್ಡಿಸಿವರ್ ಮಾರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ವೈದ್ಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನ್ಯಾಯದ ಕುರಿತಂತೆ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ. ಈ ಘಟನೆಯಿಂದ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದ್ದು, ಇಲಾಖಾ ಮಟ್ಟದ ವಿಚಾರಣೆಯ ಬಳಿಕ ತಪ್ಪಿತಸ್ಥರು ಯಾರು ಅನ್ನುವುದು ಗೊತ್ತಾಗಬೇಕಾಗಿದೆ.
Discussion about this post