ಬೆಂಗಳೂರು : ನಟ ಸಂಚಾರಿ ವಿಜಯ್ ಇನ್ನಿಲ್ಲ. ಇನ್ನು ಅವರು ಬರೀ ನೆನಪು ಮಾತ್ರ. ಅವರ ಸಾಧನೆಗಳು, ಅವರ ಚಿತ್ರಗಳು ಅವರ ನೆನಪನ್ನು ಚಿರಸ್ಥಾಯಿಯಾಗಿಸಲಿದೆ.
ಈ ನಡುವೆ ಪಂಚನಹಳ್ಳಿಯಲ್ಲಿ ಲಿಂಗಾಯತ ಸಂಪ್ರದಾಯದಂತೆ ವಿಜಯ್ ಅಂತ್ಯ ಸಂಸ್ಕಾರವೂ ನೆರವೇರಿದ್ದು, ಮಣ್ಣಾಲ್ಲಿ ಮಣ್ಣಾಗಿದ್ದಾರೆ. ಇದೀಗ ಅವರ ಅಂತಿಮ ವಿಧಿ ವಿಧಾನ ಮುಕ್ತಾಯವಾಗುತ್ತಿದ್ದಂತೆ ಅವರ ಚಿಕಿತ್ಸಾ ವೆಚ್ಚ ಕುರಿತ ಚರ್ಚೆಯೊಂದು ಮುನ್ನಲೆಗೆ ಬಂದಿದೆ.
ಬೈಕ್ ಅಪಘಾತವಾದ ಬೆನ್ನಲ್ಲೇ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಾದ ವಿಜಯ್ ಅವರನ್ನು ಉಳಿಸಲು ವೈದ್ಯರ ತಂಡ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಅದ್ಯಾವ ಆಧುನಿಕ ಚಿಕಿತ್ಸಾ ವ್ಯವಸ್ಥೆಗಳಿದೆಯೋ ಅವೆಲ್ಲವನ್ನೂ ಈ ವೇಳೆ ಬಳಸಿಕೊಳ್ಳಲಾಗಿತ್ತು. ಹಾಗಾದರೆ ವಿಜಯ್ ಅವರ ಆಸ್ಪತ್ರೆ ಬಿಲ್ ಎಷ್ಟಾಗಿರಬಹುದು, ಕಾರಿನ ಇಎಂಐ ಕಟ್ಟಲು ಪರದಾಡುತ್ತಿದ್ದ ವಿಜಯ್ ಕೈಯಲ್ಲಿ ಅಷ್ಟೊಂದು ದುಡ್ಡು ಇತ್ತಾ, ಮಧ್ಯಮ ವರ್ಗದ ಕುಟುಂಬ ಸದಸ್ಯರು ಆಸ್ಪತ್ರೆ ಬಿಲ್ ಕಟ್ಟಲು ಸಾಧ್ಯವೇ ಅನ್ನುವ ಕಾಳಜಿಯೂ ವ್ಯಕ್ತವಾಗಿತ್ತು.
ಹೀಗಾಗಿಯೇ ವಿಜಯ್ ಅವರ ಆರೋಗ್ಯ ವೆಚ್ಚವನ್ನು ಭರಿಸಲು ಡಿಸಿಎಂ ಡಾ ಅಶ್ವಥ್ ನಾರಾಯಣ್ ಮುಂದಾಗಿದ್ದರು. ಈ ಸಂಬಂಧ ಅವರು ಘೋಷಣೆಯನ್ನೂ ಮಾಡಿದ್ದರು. ಆದರೆ ಯಾವಾಗ ಈ ಕುರಿತಂತೆ ಆಸ್ಪತ್ರೆ ಆಡಳಿತ ಮಂಡಳಿ ಜೊತೆಗೆ ಡಿಸಿಎಂ ಮಾತನಾಡಿದರೋ ಶಾಕಿಂಗ್ ಸುದ್ದಿ ಸಿಕ್ಕಿದೆ.
ವಿಜಯ್ ಅವರ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಯೇ ನೋಡಿಕೊಳ್ಳಲಿದೆ. ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಅಪರೂಪದ ಕಲಾವಿದನನ್ನು ಕಾಸಿನಿಂದ ಅಳೆಯಲು ಸಾಧ್ಯವಿಲ್ಲ. ಕಲಾವಿದನೊಬ್ಬನಿಗೆ ಚಿಕಿತ್ಸಾ ನೀಡುವ ಮೂಲಕ ನಾವು ಸಮಾಜದ ಸೇವೆ ಮಾಡುತ್ತೇವೆ. ಈಗಾಗಲೇ ಕುಟುಂಬ ಸದಸ್ಯರು ಕಟ್ಟಿರುವ ಹಣವನ್ನು ಕೂಡಾ ನಾವು ವಾಪಾಸ್ ಕೊಟ್ಟಿದ್ದೇವೆ. ವಿಜಯ್ ಚಿಕಿತ್ಸೆಗಾಗಿ ಯಾರೊಬ್ಬರೂ ಒಂದು ರೂಪಾಯಿ ಕೊಡಬೇಕಿಲ್ಲ. ಎಲ್ಲವನ್ನೂ ಆಸ್ಪತ್ರೆಗೆ ಬಿಡಿ ಅಂದಿದ್ದಾರೆ.
Discussion about this post