ಬೆಂಗಳೂರು : ಸಂಚಾರಿ ವಿಜಯ್ ಸಾವಿನಿಂದ ಇಡೀ ನಾಡು ಹೊರ ಬಂದಿಲ್ಲ. ಪ್ರತಿಭಾವಂತ ಕಲಾವಿದನೊಬ್ಬನನ್ನು ಕಳೆದುಕೊಂಡ ನೋವು ಎಲ್ಲರನ್ನೂ ಕಾಡುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯಂತಹ ಸಂಸ್ಥೆ ಮಾತ್ರ ಸಂಚಾರಿ ವಿಜಯ್ ಅವರನ್ನು ಮರೆತು ಬಿಟ್ಟಿದೆ. ಹಾಗೇ ನೋಡಿದರೆ ರಾಷ್ಟ್ರಪ್ರಶಸ್ತಿ ಪಡೆದವರೊಬ್ಬರು ಇದ್ರು ಅನ್ನುವುದು ಕೂಡಾ ಅವರಿಗೆ ಗೊತ್ತಿರಲಿಕ್ಕಿಲ್ಲ. ಅಲ್ಲೇನಿದ್ದರೂ ಗೌರವ ಸಿಗುವವರಿಗೆ ಮಾತ್ರ ಸಿಗುವುದು.
ಈ ನಡುವೆ ಸಂಚಾರಿ ವಿಜಯ್ ಸಾವಿನ ಕುರಿತಂತೆ ತನಿಖೆ ಪ್ರಾರಂಭಗೊಂಡಿದ್ದು, ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಮಂದಿಯ ಸ್ಟೇಟ್ ಮೆಂಟ್ ಕೂಡಾ ಪಡೆಯಲಾಗಿದೆ. ಹೀಗಾಗಿ ಅವರ ಸ್ನೇಹಿತರು ಠಾಣೆಗೆ ತೆರಳಿ ಸ್ಟೇಟ್ ಮೆಂಟ್ ಕೊಟ್ಟು ಬಂದಿದ್ದಾರೆ.
ಇದೀಗ ವಿಜಯ್ ಸಾವಿಗ ಬಿಬಿಎಂಪಿಯ ಅವೈಜ್ಞಾನಿಕ ಕಾಮಗಾರಿ ಅನ್ನುವ ಸಂಶಯ ಮೂಡಲಾರಂಭಿಸಿದೆ. ಅಪಘಾತ ನಡೆದ ಸ್ಥಳದಲ್ಲಿ ಮ್ಯಾನ್ ಹೋಲ್ ಇದ್ದು, ರಸ್ತೆಯ ಮಟ್ಟಕ್ಕಿಂತ ಮ್ಯಾನ್ ಹೋಲ್ ಸಾಕಷ್ಟು ಕೆಳಗಿದೆ. ತಕ್ಷಣಕ್ಕೆ ನೋಡಿದರೆ ದೊಡ್ಡದೊಂದು ಗುಂಡಿಯಂತೆ ಗೋಚರಿಸುತ್ತದೆ. ಜೊತೆಗೆ ಇದು ತಿರುವಿನಲ್ಲೇ ಇರುವ ಕಾರಣ ದ್ವಿಚಕ್ರ ವಾಹನ ಸವಾರರ ಪಾಲಿಗಿದು ಕಂಟಕವಾಗಿದೆ. ವಿಜಯ್ ಅಪಘಾತಕ್ಕಿಂತ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಇಲ್ಲೇ ಬಿದ್ದಿದ್ದರಂತೆ. ಸ್ಥಳಿಯರು ಹೇಳುವ ಪ್ರಕಾರ ಇದೊಂದು ಆಕ್ಸಿಡೆಂಟ್ ಸ್ಪಾಟ್.
ನವೀನ್ ಹಾಗೂ ವಿಜಯ್ ಮೆಡಿಸಿನ್ ತರುವ ಸಲುವಾಗಿ ಮೆಡಿಕಲ್ ಕಡೆ ಹೊರಟಿದ್ದರು. ಈ ಸಂದರ್ಭದಲ್ಲಿ ನವೀನ್ ಪರ್ಸ್ ಮರೆತಿದ್ದರು.ಹೀಗಾಗಿ ವಾಪಾಸ್ ಬರುವಾಗ ಈ ಅಪಘಾತ ನಡೆದಿದೆ. ನವೀನ್ ಮನೆಯಿಂದ 50 ಮೀಟರ್ ದೂರದಲ್ಲಿ ಈ ದುರಂತ ಸಂಭವಿಸಿದ್ದು, ಮ್ಯಾನ್ ಹೋಲ್ ತಪ್ಪಿಸಲು ಹೋಗಿಯೇ ಬೈಕ್ ನಿಯಂತ್ರಣ ತಪ್ಪಿರಬೇಕು ಅನ್ನುವುದು ಈಗಿರುವ ಸಂಶಯ. ಬೈಕ್ ವೇಗವಾಗಿತ್ತು, ನವೀನ್ ಯಡವಟ್ಟು ಅನ್ನುವುದು ಸುಳ್ಳು ಎನ್ನಲಾಗಿದೆ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದಿರು ಅವೈಜ್ಞಾನಿಕ ಕಾಮಗಾರಿಗಳಿಗೆ ಇನ್ನೆಷ್ಟು ಬಲಿಬೇಕು.
Discussion about this post