ಜೈಲು ನಿಯಮಗಳ ಅಡಿಯಲ್ಲಿ ಸನ್ನಡತೆ ಆಧಾರದಲ್ಲಿ141 ಬಂಧಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಆದೇಶದಲ್ಲಿ 14 ವರ್ಷ ಶಿಕ್ಷೆ ಪೂರೈಸಿದವರನ್ನೆಲ್ಲಾ ಬಿಡುಗಡೆಗೊಳಿಸಲಾಗಿತ್ತು. ಆದರೆ ನಿಯಮದ ಪ್ರಕಾರ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಂಧಿಗಳನ್ನು ಸನ್ನಡತೆ ಆಧಾರದಲ್ಲೂ ಬಿಡುಗಡೆ ಮಾಡುವಂತಿಲ್ಲ. ಹೀಗಾಗಿ ತನ್ನ ಪ್ರಕರಣವನ್ನು ಸನ್ನಡತೆಗೆ ಪರಿಗಣಿಸುವುದಿಲ್ಲ ಎಂದು ನೊಂದುಕೊಂಡ ಸಜಾಬಂಧಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವನನ್ನು ನೆಲಮಂಗಲದ ಮಂಜು ಅಲಿಯಾಸ್ ಮಂಜುನಾಥ್ ಎಂದು ಗುರುತಿಸಲಾಗಿದೆ.
ಸನ್ನಡತೆ ಆಧಾರದಲ್ಲಿ ಬಂಧಿಗಳ ಬಿಡುಗಡೆಗೆ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ತಾನು ಬಿಡುಗಡೆ ಆಗುವುದಿಲ್ಲ ಎಂದು ಸಹಬಂದಿಗಳ ಜೊತೆಗೆ ಮಂಜುನಾಥ್ ಸಂಕಟ ತೋಡಿಕೊಂಡಿದ್ದನಂತೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 35 ವರ್ಷ ವಯಸ್ಸಿನ ಮಂಜುನಾಥ 16 ವರ್ಷ ಜೈಲು ಶಿಕ್ಷೆ ಪೂರೈಸಿದ್ದ. ಬುಧವಾರ ಬೆಳಗ್ಗೆ 5.30 ರ ಸುಮಾರಿಗೆ ಎಲ್ಲಾ ಬ್ಯಾರಕ್ಗಳಿಗೆ ಹಾಲು, ಕಾಫಿ ಸರಬರಾಜು ಮಾಡಿ ‘ಡಿ’ ಬ್ಯಾರಕ್ಗೆ ಬಂದಿದ್ದ, ಈತ ಅಲ್ಲೇ ಕಬ್ಬಿಣದ ಕಂಬಿಯೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ಬ್ಯಾರಕ್ ಗಳು ತೆರೆಯುತ್ತಿದ್ದಂತೆ ಮೃತ ದೇಹವನ್ನು ಗಮನಿಸಿದ ಇತರ ಬಂಧಿಗಳು ವಿಷಯವನ್ನು ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಹಿಂದೆ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಜೈಲು ಇಲಾಖೆಯ ಡಿಐಜಿಪಿ ಆಗಿದ್ದ ಸಂದರ್ಭದಲ್ಲಿಕೇಂದ್ರ ಕಾರಾಗೃಹದ ಲೋಪಗಳನ್ನು ಬೆಳಕಿಗೆ ತಂದಿದ್ದರು.
ಕಾರಾಗೃಹದೊಳಗಿನ ಲೋಪಗಳನ್ನೆಲ್ಲ ರೂಪಾ ಅವರ ಗಮನಕ್ಕೆ ತರುವಲ್ಲಿ ಸಜಾ ಬಂಧಿಗಳ ಒಂದು ತಂಡ ಕೆಲಸ ಮಾಡಿತ್ತು. ಮಂಜುನಾಥ್ ಈ ತಂಡದ ಪ್ರಮುಖ ವ್ಯಕ್ತಿಯಾಗಿದ್ದ.
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದ್ದ ಬಂಧಿಗಳ ಚುನಾವಣೆಯಲ್ಲಿ ಗೆದ್ದಿದ್ದ ಮಂಜುನಾಥ್ ಪಂಚಿ ಆಗಿ ನೇಮಕಗೊಂಡಿದ್ದ. ಪಂಚಿಗಳೇ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲೂ ಅಡುಗೆ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.
Discussion about this post