ಬೆಂಗಳೂರು : ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬೀಳಲು ಮುನ್ನುಡಿ ಬರೆದವರೇ ಆನಂದ್ ಸಿಂಗ್. ಕುಮಾರಸ್ವಾಮಿಯವರು ಜಿಂದಾಲ್ ಗೆ ಭೂಮಿ ಕೊಡಲು ಕೈಗೊಂಡ ನಿರ್ಧಾರ ಆನಂದ್ ಸಿಂಗ್ ಕೆಂಗಣ್ಣಿಗೆ ಗುರಿಯಾಗಿತ್ತು. ಜೊತೆಗೆ ಬಳ್ಳಾರಿಯನ್ನು ಒಡೆದು ವಿಜಯ ನಗರ ಜಿಲ್ಲೆ ಮಾಡಿಕೊಡಿ ಅನ್ನುವ ಮನವಿಗೆ ಕುಮಾರಸ್ವಾಮಿ ಸೊಪ್ಪು ಹಾಕಲಿಲ್ಲ ಅನ್ನುವ ಕಾರಣಕ್ಕೆ ಆನಂದ್ ಸಿಂಗ್ ರಾಜೀನಾಮೆ ಕೊಟ್ಟಿದ್ದರು.
ಇದಾದ ಬಳಿಕ ಬೇರೆ ಬೇರೆ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟು, ಕೋರ್ಟ್ ಅಲೆದು ಬಿಜೆಪಿ ಸೇರಿ ಶಾಸಕರಾಗಿದ್ದು ಇತಿಹಾಸ.
ಈ ಆನಂದ್ ಸಿಂಗ್ ಯಾವಾಗ ಬಿಜೆಪಿಗೆ ಬಂದರೋ ಅವರು ಯಡಿಯೂರಪ್ಪ ಮುಂದೆ ಇಟ್ಟಿದ್ದು ಒಂದೇ ಸಾಲಿನ ಬೇಡಿಕೆ, ಅದು ವಿಜಯನಗರ ಜಿಲ್ಲೆ. ಯಡಿಯೂರಪ್ಪ ಅವರು ಯಾವಾಗ ತಥಾಸ್ತು ಅಂದ್ರೋ, ನನಗೆ ಮಂತ್ರಿ ಸ್ಥಾನವೇ ಬೇಡ ಕೇವಲ ಶಾಸಕರಾಗಿ ಇರುತ್ತೇನೆ ಎಂದು ಹೋದಲ್ಲಿ ಬಂದಲ್ಲಿ ಹೇಳಿಕೊಂಡು ಬಂದ್ರು.
ಇನ್ನು ಯಡಿಯೂರಪ್ಪ ವಿಜಯನಗರ ಜಿಲ್ಲೆ ರಚನೆಗೆ ಮುಂದಾಗುತ್ತಿದ್ದಂತೆ ಬಳ್ಳಾರಿಯ ರೆಡ್ಡಿ ಬಳಗ ಎದ್ದು ನಿಂತಿತು. ಶ್ರೀರಾಮುಲು ಕೂಡಾ ಸಿಡಿದೆದ್ದರು. ಆದರೆ ಅದ್ಯಾವುದಕ್ಕೋ ಕ್ಯಾರೆ ಅನ್ನದ ಯಡಿಯೂರಪ್ಪ ಆನಂದ್ ಸಿಂಗ್ ಮಾತು ಕೊಟ್ಟಿದ್ದೇನೆ, ಜಿಲ್ಲೆ ಮಾಡಲೇಬೇಕು ಎಂದು ವಿಜಯನಗರ ಜಿಲ್ಲೆಯನ್ನು ಘೋಷಿಸಿದರು. ಆಗ್ಲೂ ಮಂತ್ರಿ ಸ್ಥಾನ ಬೇಡ ಎಂದು ಉದಾರ ಮನೋಭಾವನೆ ತೋರಿದರು.
ಆದರೆ ಆನಂದ್ ಸಿಂಗ್ ಅಸಲಿ ಮುಖವಾಡ ಕಳಚಿದ್ದು ಯಡಿಯೂರಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಜೊತೆಗೆ ಪರಿಸರ ಖಾತೆಯನ್ನು ಕೊಟ್ಟಾಗ. ಆಹಾರ ಮತ್ತು ನಾಗರಿಕ ಸರಬರಾಜು ಅನ್ನುವುದು ದೊಡ್ಡ ಖಾತೆ, ಜನರಿಗೆ ಹತ್ತಿರವಾಗಬಲ್ಲ ಖಾತೆ ಅದನ್ನೇ ಬೇಡ ಅಂದ ಆನಂದ್ ಸಿಂಗ್ ಹಜ್ ವಕ್ಫ್ ಜೊತೆಗೆ ಮೂಲಭೂತ ಸೌಕರ್ಯ ಖಾತೆ ಕೊಡಲಾಯ್ತು. ಮೂಲಭೂತ ಸೌಕರ್ಯ ಅನ್ನುವುದು ಅದ್ಯಾವುದೇ ಖಾತೆಗೂ ಕಮ್ಮಿಯಿಲ್ಲ. ಅದನ್ನೂ ಬೇಡ ಅಂದ್ರು. ಕೊನೆಗೆ ಅರಣ್ಯ ಮತ್ತು ಪರಿಸರ ಖಾತೆಯನ್ನು ಕೊಟ್ಟ ವೇಳೆ ಸಮಾಧಾನಗೊಂಡ ಆನಂದ್ ಸಿಂಗ್ ಕಾಡು ಸುತ್ತಲಾರಂಭಿಸಿದರು. ಬಳಿಕ ಯೋಗಿಶ್ವರ್ ಮಂತ್ರಿಯಾದ್ರು, ಪರಿಸರ ಖಾತೆ ಅವರ ಪಾಲಾಯ್ತು.
ಇದಾದ ಬಳಿಕ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ಬಂದ್ರು, ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕರಿಗೆ ಅದೇ ಖಾತೆಯನ್ನು ನೀಡಲಾಗಿತ್ತು. ಆದರೆ ಆನಂದ್ ಸಿಂಗ್ ಮೇಲೆ ಅರಣ್ಯ ಒತ್ತುವರಿ ಆರೋಪವಿದೆ, ಹೀಗಾಗಿ ಅರಣ್ಯ ಖಾತೆ ಕೊಡಲು ಬೊಮ್ಮಾಯಿ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಪ್ರವಾಸೋದ್ಯಮ ಖಾತೆ ಕೊಟ್ರು. ಇದೇ ಖಾತೆಯನ್ನು ಹಿಂದೆ ಜನಾರ್ಧನ ರೆಡ್ಡಿ ನಿರ್ವಹಿಸಿದ್ದರು. ಆಗ ಅವರು ಮಾಡಿದ ಕೆಲಸವನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅಂದು ಖಾತೆ ಬೇಡ ಅಂದಿದ್ದ ಆನಂದ್ ಸಿಂಗ್ ಇದೀಗ ಮತ್ತೆ ಕ್ಯಾತೆ ತೆಗೆದಿದ್ದಾರೆ. ಸಣ್ಣ ಪುಟ್ಟ ಖಾತೆ ಕೊಟ್ಟು ಅವಮಾನಿಸಲಾಗಿದೆ.ನಾನೇನು ಅಸಮರ್ಥನೆ, ರಾಜೀನಾಮೆ ಕೊಟ್ಟು, ರಾಜಕೀಯ ಸನ್ಸಾಸ ಸ್ವೀಕರಿಸುತ್ತೇನೆ ಅನ್ನುವ ಮಾತುಗಳನ್ನು ಆಡಿದ್ದಾರೆ.
ಆದರೆ ಇದಕ್ಕೆಲ್ಲಾ ಸೊಪ್ಪು ಹಾಕದ ಬಸವರಾಜ್ ಬೊಮ್ಮಾಯಿ ಮಂತ್ರಿಯಾಗಿ ಮುಂದುವರಿಯುವುದಿದ್ರೆ ಇದೇ ಖಾತೆಯಲ್ಲಿ ಮುಂದುವರಿಯಿರಿ, ಇಲ್ಲ ಅಸಾಧ್ಯ ಅನ್ನುವುದಾದರೆ ನಿಮ್ಮ ದಾರಿ ನಿಮಗೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮಾತಿನಿಂದ ಕಂಗಲಾಗಿರುವ ಆನಂದ್ ಸಿಂಗ್ ಸಚಿವರಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಬದಲಾಗಿ ಜಿಲ್ಲೆಗೆ ವಿಶೇಷ ಅನುದಾನ ಕೊಡಿ ಎಂದು ಸಿಎಂಗೆ ಆನಂದ್ ಸಿಂಗ್ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಿಎಂ ಕೂಡಾ ಒಕೆ ಅಂದಿದ್ದಾರೆ.
Discussion about this post