ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣಕಜೆಯ ಯುವಕನೊಬ್ಬ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಸ್ಟೋರಿ, ಸಿಂಗಂ ಖ್ಯಾತಿಯ ರವಿ ಚನ್ನಣ್ಣನವರ್ ಜೀವನ ಸಾಧನೆಯನ್ನು ನೆನಪಿಸುವಂತಿದೆ.
ನಿಯಾಜ್ ಪಣಕಜೆ, ಕಣ್ಣು ತುಂಬಾ ಕನಸುಗಳನ್ನು ತುಂಬಿಕೊಂಡ ಯುವಕ. ಮುಂದಿರುವುದು ಮುಳ್ಳಿನ ಹಾದಿ ಎಂದು ಗೊತ್ತಿದ್ದರೂ ಸಾಧನೆ ಶಿಖರವೇರಲೇಬೇಕು ಎಂದು ಪಣ ತೊಟ್ಟ ಛಲಗಾರ. ತಮ್ಮ ಈ ಹಠ ಸಾಧನೆಯಿಂದಲೇ ನಿಯಾಜ್ ಪಣಕಜೆ ಇದೀಗ ಡಾ.ಪಣಕಜೆಯಾಗಿ ಹೊರ ಹೊಮ್ಮಿದ್ದಾರೆ.
ನಿಯಾಜ್ ಪಣಕಜೆ ಓದಿನಲ್ಲಿ ಸಿಕ್ಕಾಪಟ್ಟೆ ಮುಂದಿದ್ದ ಹುಡುಗ, ಆದರೆ ಮನೆಯಲ್ಲಿ ಕಿತ್ತು ತಿನ್ನುತ್ತಿದ್ದ ಬಡತನ ಅವರನ್ನು ಓದಿನಿಂದ ಹಿಂದಕ್ಕೆ ಎಳೆಯುತ್ತಿತ್ತು. ಮನೆಯಲ್ಲಿ ಅನಾರೋಗ್ಯ ಪೀಡಿತ ತಂದೆ, ಬೀಡಿ ಕಟ್ಟಿ ಮನೆ ನಡೆಸುತ್ತಿರುವ ತಾಯಿ ಇವಿಷ್ಟು ಅವರ ಪರಿಸ್ಥಿತಿಯನ್ನು ಕಣ್ಣ ಮುಂದೆ ತಂದುಕೊಳ್ಳಲು ಸಾಕು.
ಮನೆಯ ಸಮಸ್ಯೆಯ ನಡುವೆಯೂ ನಾನು ಓದಬೇಕು,ಸಾಧನೆ ಮಾಡಲೇಬೇಕು ಎಂದು ಪಣಕಜೆ ನಿರ್ಧರಿಸಿದ್ದರು. ಹೀಗಾಗಿ ತನ್ನ ಓದು ಮನೆಗೆ ಭಾರವಾಗಬಾರದು ಎಂದು ಓದಿನ ನಡುವೆಯೇ ಕೂಲಿ ಕೆಲಸಕ್ಕೆ ಹೋಗಲಾರಂಭಿಸಿದರು. ಹಳ್ಳಿಯ ಹುಡುಗ ಅದ್ಯಾವ ಕೆಲಸ ಮಾಡಿಲ್ಲ ಕೇಳಿ, ಬಾವಿ ತೋಡುವುದು, ಗೊಬ್ಬರ ಹೊರುವುದು ಹೀಗೆ ಹಳ್ಳಿಯ ಪ್ರತಿಯೊಂದು ಕೂಲಿ ಕೆಲಸವೂ ಇವರಿಗೆ ಗೊತ್ತು.
ಅಷ್ಟು ಮಾತ್ರವಲ್ಲದೆ ಕೂಲಿ ಕೆಲಸವಿಲ್ಲದ ಸಂದರ್ಭದಲ್ಲಿ ಸೈಕಲ್ ರಿಪೇರಿ, ಮೀನು ಮಾರಾಟ, ಹಾಲು ಹಾಕೋದು, ಪೇಪರ್ ಮಾರಾಟ ಮಾಡಿಯೂ ಇವರಿಗೆ ಅಭ್ಯಾಸವಿದೆ.
ಹೀಗೆ ದುಡಿದು ಬಂದ ಹಣದಿಂದಲೇ ಓದು ಮುಂದುವರಿಸಿದ ಪಣಕಜೆ, ಉನ್ನತ ವ್ಯಾಸಂಗಕ್ಕೆ ಬರೋ ಹೊತ್ತಿಗೆ ಕೂಲಿ ಕೆಲಸಕ್ಕೆ ಹೋಗೋದು ಕಷ್ಟವಾಯ್ತು. ಹೀಗಾಗಿ ಆಟೋ ರಿಕ್ಷಾದಲ್ಲಿ ದುಡಿಯಲಾರಂಭಿಸಿದರು. ಕೆಲವು ವೇಳೆ ಲಾಡ್ಜ್ ನಲ್ಲಿ ರಿಸೆಪನ್ಸ್ ಆಗಿಯೂ ಕೆಲಸ ಮಾಡಿದ್ದರು.
ಹೀಗೆ ಎಲ್ಲಾ ಕೆಲಸ ಮಾಡಿ ಉನ್ನತ ವ್ಯಾಸಂಗ ಮುಗಿಸಿದ ನಿಯಾಜ್ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಕಾಮರ್ಸ್ ವಿಭಾಗದಲ್ಲಿ ಸಹಾಯ ಪ್ರಾಧ್ಯಾಪಕನಾಗಿ ಸೇರಿದರು. ಆಗ್ಲೂ ಅವರ ಓದಿನ ದಾಹ ತೀರಿರಲಿಲ್ಲ.
ಹೀಗಾಗಿ ರೋಲ್ ಆಫ್ ಕೋ ಆಪರೇಟಿವ್ ಬ್ಯಾಂಕಿಂಗ್ ಇನ್ ಸೋಷಿಯೋ ಎಕಾನಾಮಿಕ್ ಡೆವಲಪ್ ಮೆಂಟ್ ಆಫ್ ರೂರಲ್ ಮುಸ್ಲಿಂ ಕಮ್ಯೂನಿಟೀಸ್ ಅನ್ನುವ ವಿಷಯನ್ನು ಆಯ್ಕು ಕೊಂಡು ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಸಂಶೋಧನೆ ನಡೆಸಿದರು. ಈ ಸಂಶೋಧನೆಯನ್ನು ಪ್ರಬಂಧ ರೂಪದಲ್ಲಿ ಮಂಡಿಸಿ ಇದೀಗ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.
Discussion about this post