ಬೆಂಗಳೂರು : ನಮ್ಮನೆ ಯುವರಾಣಿ ಧಾರಾವಾಹಿಯ ಮೀರಾ ಪಾತ್ರಧಾರಿ ಅಂಕಿತಾ ಅಮರ್ ಅವರ ಕುಣಿತದ ಭಜನೆ ವಿಡಿಯೋ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದೆಷ್ಟರ ಮಟ್ಟಿಗೆ ಅಂದ್ರೆ ಭಜನೆಯಂದ್ರೆ ಮೂಗು ಮುರಿಯೋ ಮಂದಿ ಕೂಡಾ ಶೇರ್ ಬಟನ್ ಒತ್ತಿದ್ದಾರೆ.
ಹಾಗಾದ್ರೆ ಈ ವಿಡಿಯೋ ವೈರಲ್ ಆಗಿದ್ಯಾಕೆ ಅನ್ನುವುದನ್ನು ಹುಡುಕುತ್ತಾ ಹೋದ್ರೆ ಸಿಕ್ಕಿದ್ದು ಅಚ್ಚರಿಯ ವಿಷಯ.
ಈ ರೀತಿಯ ಕಾರ್ಯಕ್ರಮ ಮೈಸೂರಿನಲ್ಲಿ ಅದೆಷ್ಟು ಬಾರಿ ನಡೆದಿದೆಯೋ ಗೊತ್ತಿಲ್ಲ, ಉಡುಪಿ ಸೇರಿದಂತೆ ಕರಾವಳಿಯ ಅನೇಕ ಭಾಗಗಳಲ್ಲಿ ಇದೇ ತಂಡ ಇದೇ ರೀತಿ ಕಾರ್ಯಕ್ರಮ ನಡೆಸಿ ಕೊಟ್ಟಿತ್ತು, ಆದರೆ ವೈರಲ್ ಆಗಿರಲಿಲ್ಲ.
ಅಂದ ಹಾಗೇ ವೈರಲ್ ಆಗಿರುವ ವಿಡಿಯೋ ಶೂಟ್ ಆಗಿರೋದು ಮೂಡಬಿದ್ರೆ ಸಮೀಪದ ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಬೀದಿಯಲ್ಲಿ.
ಈ ಕಾರ್ಯಕ್ರಮ ನಡೆಸಿಕೊಟ್ಟವರು ಮೈಸೂರಿನ ರಘು ಲೀಲಾ ಸ್ಕೂಲ್ ಆಫ್ ಮ್ಯೂಸಿಕ್ ತಂಡದವರು.
ಸಂಗೀತ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮ ವಿಶ್ವಾಸ ಮೂಡಿಸುವ ಸಲುವಾಗಿ ಈ ಹಿಂದಿನಿಂದಲೂ ಸಂಗೀತ ಗುರುಗಳು ಇಂಥ ಸಂಕೀರ್ತನೆ ನಡೆಸುತ್ತಿದ್ದರು.
ತಿಂಗಳಿಗೊಂದು ದಿನ ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನಕ್ಕೆ ಸಂಕೀರ್ತನೆ ನಡೆಸುತ್ತಿದ್ದರು.
ಕಾಲ ಕ್ರಮೇಣ ಈ ಸಂಪ್ರದಾಯ ನಿಂತು ಹೋಯ್ತು. ಇದೀಗ ಮತ್ತೆ ಮೈಸೂರಿನ ರಘು ಲೀಲಾ ಸ್ಕೂಲ್ ಆಫ್ ಮ್ಯೂಸಿಕ್ ತಂಡದ ಮುಖ್ಯಸ್ಥೆ ಸುನೀತಾ ಚಂದ್ರಕುಮಾರ್ ಸಂಕೀರ್ತನೆಯನ್ನು ಪ್ರಾರಂಭಿಸಿದ್ದಾರೆ.
ತಿಂಗಳ ಮೊದಲ ಭಾನುವಾರದ ಮುಂಜಾನೆ ಈ ಸಂಕೀರ್ತನೆ ಹಲವು ಸಮಯದಿಂದ ನಡೆಯುತ್ತಿದೆ.
ಹಾಗೇ ಶೃಂಗೇರಿ,ಪಲಿಮಾರು ಪರ್ಯಾಯ ಸಂದರ್ಭದಲ್ಲೂ ಸುನೀತಾ ತಂದ್ರಕುಮಾರ್ ತಂಡದವರು ಕಾರ್ಯಕ್ರಮ ಕೊಟ್ಟಿದ್ದರು.
ಅದೇ ರೀತಿ ಸುನೀತಾ ಅವರ ತಂಡದಲ್ಲಿದ್ದ ಕಲಾವತಿ ಎಂಬವರ ತವರು ಮನೆ ಮೂಡಬಿದರೆಯಲ್ಲಿದೆ. ಹೀಗಾಗಿ ನಮ್ಮೂರಿನಲ್ಲೊಂದು ಸಂಕೀರ್ತನೆ ನಡೆಸಬೇಕು ಅನ್ನುವುದು ಅವರ ಅಸೆಯಾಗಿತ್ತು.
ಅದರಂತೆ ಫೆ 7ರಂದು 65 ಜನರ ತಂಡ ಸಂಕೀರ್ತನೆ ನಡೆಸಿಕೊಟ್ಟಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ರಘು ಲೀಲಾ ಸ್ಕೂಲ್ ಆಫ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಗಳ ಸಾಧನೆಗೊಂದು ಸಾಕ್ಷಿ ಇಲ್ಲಿದೆ.
Discussion about this post