ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ನೇಮಕಗೊಳಿಸಲಾಗಿದೆ.
ಸತತ ಮೂರು ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡಿರುವ ನಳಿನ್ ಕುಮಾರ್ ಕಟೀಲ್ ಅಚ್ಚರಿ ಅನ್ನುವಂತೆ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕಗೊಂಡಿದ್ದಾರೆ.
ಸಾಮಾನ್ಯ ಕಾರ್ಯಕರ್ತನಿಂದ ಸಂಸದರಾಗಿ ಸತತ ಮೂರು ಸಲ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸುವುದು ಸುಲಭವಿಲ್ಲ. ಹಿರಿಯರು ಮತ್ತು ಕಿರಿಯರ ನಡುವೆ ಕೊಂಡಿಯಾಗಬೇಕಾಗಿರುವ ಅನಿವಾರ್ಯತೆ ಅವರಿಗಿದ್ದು, ಸಂಪುಟ ವಿಸ್ತರಣೆಯ ನಂತರದ ಅಸಮಾಧಾನವನ್ನು ನಿಭಾಯಿಸಬೇಕಾಗಿದೆ.
ಸರ್ಕಾರ ಮತ್ತು ಪಕ್ಷದ ನಡುವೆ ಹೊಂದಾಣಿಕೆ ಮಾಡಬೇಕಾಗಿದ್ದು, ಸಚಿವರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಕೇಂದ್ರ ನಾಯಕರು ಮತ್ತು ಆರ್.ಎಸ್.ಎಸ್. ಜೊತೆಗೆ ಒಳ್ಳೆಯ ನಂಟು ಹೊಂದಿರುವ ಕಾರಣದಿಂದ ಇದು ಸುಲಭವಾಗಬಹುದು.
ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ ಸೈಂಟ್ ಫಿಲೋಮಿನಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದ ನಳಿನ್ ಆ ಕಾಲದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ಆಕರ್ಷಿತರಾಗಿ ತಮ್ಮ 18ನೇ ವಯಸ್ಸಿನಲ್ಲೇ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು.
12 ವರ್ಷಗಳ ಕಾಲ ಆರ್.ಎಸ್.ಎಸ್. ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು.
2004ರಲ್ಲಿ ಜಿಲ್ಲಾ ಬಿಜೆಪಿಯ ಸಂಘಟನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಳಿನ್ ಕುಮಾರ್ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದರು. 2014ರಲ್ಲಿ ಪುನರಾಯ್ಕೆಯಾದರು. ಮತ್ತೆ 2019ರಲ್ಲಿ ಮೂರನೇ ಬಾರಿಗೆ ಭರ್ಜರಿ ಅಂತರದಲ್ಲಿ ಗೆದ್ದು ‘ಹ್ಯಾಟ್ರಿಕ್ ಸರದಾರ’ ಎನಿಸಿಕೊಂಡರು.
ಕೇಂದ್ರ ಸರಕಾರದ ಕೃಷಿ ಸ್ಥಾಯೀ ಸಮಿತಿ, ತೆಂಗು ಅಭಿವೃದ್ಧಿ ಮಂಡಳಿ, ನೆಹರೂ ಯುವ ಕೇಂದ್ರ, ಯೋಜನಾ ಸಮಿತಿ, ರಬ್ಬರ್ ಮಂಡಳಿ, ಬಂದರು ಮಂಡಳಿ ಸಹಿತ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೂರು ಬಾರಿ ಸಂಸದರಾದರು ತಮ್ಮದೇ ಕ್ಷೇತ್ರದ ಹಲವು ಗ್ರಾಮಗಳಿಗೆ ನಳಿನ್ ಈವರೆಗೂ ಭೇಟಿ ಕೊಟ್ಟಿಲ್ಲ. ಹೀಗಾಗಿ ಎಷ್ಟರ ಮಟ್ಟಿಗೆ ಪಕ್ಷ ಸಂಘಟಿಸುತ್ತಾರೆ ರಾಜ್ಯ ಸುತ್ತುತ್ತಾರೆ ಎಂದು ನೋಡಬೇಕಾಗಿದೆ.
ಇನ್ನು ನಳಿನ್ ಅವರಿಗೆ ಭಾಷಾ ಸಮಸ್ಯೆಯೂ ಇದ್ದು, ರಾಷ್ಟ್ರೀಯ ಮಾಧ್ಯಮಗಳನ್ನು ನಿಭಾಯಿಸುವುದು ಸವಾಲು ಅನ್ನಿಸಬಹುದು.
Discussion about this post