ಕಿರುತೆರೆ ಲೋಕದಲ್ಲಿ ಟಿಎನ್ ಸೀತಾರಾಮ್ ಅವರ ತೂಕವೇ ಬೇರೆ. ಟಿಎನ್ಎಸ್ ಧಾರಾವಾಹಿ ಅಂದ್ರೆ ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡಬಹುದಾಗಿದೆ. ಮಾತ್ರವಲ್ಲದೆ ಅವರ ಧಾರಾವಾಹಿಯಲ್ಲಿ ಬದುಕಿಕೊಂದು ಪಾಠವಿರುತ್ತದೆ, ನೈತಿಕ ಮೌಲ್ಯಗಳಿರುತ್ತದೆ.
ದುರಾದೃಷ್ಟ ಅಂದ್ರೆ ಮಗಳು ಜಾನಕಿಯಂತಹ ಅದ್ಭುತ ಧಾರಾವಾಹಿ ಕೊರೋನಾ ಕಾರಣದಿಂದ ಅರ್ಧಕ್ಕೆ ಪ್ರಸಾರ ನಿಲ್ಲಿಸಿತ್ತು. ಜೊತೆಗೆ ಅದನ್ನು ಮುಂದುವರಿಸುವ ಬಗ್ಗೆ ಕಲರ್ಸ್ ವಾಹಿನಿ ಕೂಡಾ ಮನಸ್ಸು ಮಾಡಲಿಲ್ಲ. ಬದಲಿಗೆ ಮತ್ತೊಂದು ಪ್ರಾಜೆಕ್ಟ್ ಅನ್ನು ವಹಿಸಲಾಗಿತ್ತು. ಹೀಗಾಗಿ ಒಂದು ವರ್ಷ 5 ತಿಂಗಳ ಬಳಿಕ ಭೂಮಿಕಾ ತಂಡ ಶೂಟಿಂಗ್ ಗೆ ಹೊರಟಿದೆ.
ಅದೇ ಪ್ರಕಾರ ಮತ್ತೆ ಮನ್ವಂತರ ಅನ್ನುವ ಟೈಟಲ್ ಗಾಗಿ ಹೊಸ ಕಥೆ ಹೆಣೆದಿರುವ ಸೀತಾರಾಮ್ ಶೂಟಿಂಗ್ ಗೆ ಸಿದ್ದತೆ ಮಾಡಿಕೊಂಡಿದ್ದರು. ಆದರೆ ಮತ್ತೆ ಶುರುವಾದ ಕೊರೋನಾ ಅಬ್ಬರ ಅದಕ್ಕೆ ಬ್ರೇಕ್ ಹಾಕುವಂತೆ ಮಾಡಿತ್ತು. ಇದೀಗ ಕೊರೋನಾ ಅಬ್ಬರ ತಗ್ಗಿದ ಹಿನ್ನಲೆಯಲ್ಲಿ ಮತ್ತೆ ಮನ್ವಂತರ ಧಾರಾವಾಹಿಯ ಚಿತ್ರೀಕರಣವನ್ನು ಇಂದಿನಿಂದ ಪ್ರಾರಂಭಿಸಲಿದ್ದಾರೆ.
ಈ ಧಾರಾವಾಹಿಯ ನಾಯಕಿಯಾಗಿ ಗಾಯಕ ವಿದ್ಯಾಭೂಷಣರ ಮಗಳು ಮೇಧಾ ಕಾಣಿಸಿಕೊಳ್ಳಲಿದ್ದು, ಜೊತೆಗೆ ಮಾಳವಿಕಾ ಅವಿನಾಶ್, ನಿರಂಜನ್ ದೇಶಪಾಂಡೆ, ವೀಣಾ ಸುಂದರ್, ಮೇಘಾ ನಾಡಿಗೇರ್ ಹೀಗೆ ಭೂಮಿಕಾ ತಂಡದ ಆಸ್ಥಾನ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮತ್ತೆ ಮನ್ವಂತರದ ಟೈಟಲ್ ಗೀತೆಯನ್ನು ಎಚ್ ಎಸ್ ವೆಂಕಟೇಶ್ ಮೂರ್ತಿ ರಚಿಸಿದ್ದು, ಪ್ರವೀಣ್ ಡಿ ರಾವ್ ಸಂಗೀತ ಸಂಯೋಜಿಸಿದ್ದಾರೆ. ಎಂದಿನಂತೆ ವಿಜಯ್ ಪ್ರಕಾಶ್ ಈ ಹಾಡಿಗೆ ದನಿಯಾಗಲಿದ್ದಾರೆ.
Discussion about this post