ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡ್ಡಿನೋ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ, ಅಭಿಷೇಕ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದಾರೆ.
ಶಿರ್ವ ಮೂಲದ ಮೈಸೂರು ಕುವೆಂಪು ನಗರ ನಿವಾಸಿ ಅಭಿಷೇಕ್ (25), ಮೈಸೂರಿನ ವಿದ್ಯಾವಿಕಾಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿ, ಬಳಿಕ ಸ್ನಾತಕೋತ್ತರ ಅಧ್ಯಯನಕ್ಕಾಗಿ ಒಂದೂವರೆ ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ವಾರಾಂತ್ಯದಲ್ಲಿ ಅಭಿಷೇಕ್, ಕ್ಯಾಲಿಫೋರ್ನಿಯಾದ ಸನ್ ಬೆರ್ನಾರ್ಡಿನೋ ಹೋಟೆಲ್ನಲ್ಲಿ ಸಂಪಾದನೆಗಾಗಿ ರಿಸೆಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಉಳಿದುಕೊಂಡಿದ್ದ ಗ್ರಾಹಕನೊಬ್ಬ ರೂಮ್ನ್ನು ಖಾಲಿ ಮಾಡಬೇಕಿತ್ತು. ಈತ ಮಾಡದೆ ಇದ್ದಾಗ ಅಭಿಷೇಕ್ ಕೇಳಿದ್ದಕ್ಕೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಸ ಮುಗಿಸಿದ ಬಳಿಕ ಅಭಿಷೇಕ್ ಹೊರಬರುವಾಗ ಗ್ರಾಹಕ ಹಣೆಗೆ ರಿವಾಲ್ವರ್ನಿಂದ ಗುಂಡಿಟ್ಟು ಹತ್ಯೆ ಮಾಡಿದ ಎನ್ನಲಾಗಿದೆ.
ಘಟನೆ ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ನಡೆದಿದೆ.
ಅಭಿಷೇಕ್ ಅವರ ತಂದೆ ಸುದೇಶ್ ಮೈಸೂರಿನ ಕುವೆಂಪು ನಗರದಲ್ಲಿ ಯೋಗ ಶಿಕ್ಷಕರಾಗಿದ್ದಾರೆ. ಸುದೇಶ್ ಅವರ ತಂದೆ ಶಿರ್ವ ನಗರದಲ್ಲಿ ವಾಸಿಸುತ್ತಿದ್ದರು. ಸುದೇಶ್ ಮೈಸೂರಿಗೆ ತೆರಳಿ ಅಲ್ಲಿ ವಾಸಿಸುತ್ತಿದ್ದಾರೆ. ಅಭಿಷೇಕ್ ತಾಯಿ ಗೃಹಿಣಿಯಾಗಿದ್ದು, ಅವರ ತಮ್ಮ ಮೈಸೂರಿನಲ್ಲಿ ಪಿಯುಸಿ ಓದುತ್ತಿದ್ದಾರೆ.
Discussion about this post