ಮೈಸೂರು : ನಟ ದರ್ಶನ್ ಹೆಸರಿನಲ್ಲಿ ನಡೆಸಲು ಯತ್ನಿಸಿದ ಮೋಸದ ಪ್ರಕರಣದ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದಲ್ಲಿ ದೊಡ್ಡ ದೊಡ್ಡ ಕುಳಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದು, ಅವರನ್ನೂ ವಶಕ್ಕೆ ಪಡೆಯಲು ಮೈಸೂರು ಪೊಲೀಸರು ಮುಂದಾಗಿದ್ದಾರೆ.
ಈಗಾಗಲೇ ಪ್ರಕರಣ ಸಂಬಂಧ ದೂರು ಸಲ್ಲಿಸಿದ್ದ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಅವರಿಂದ ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ನಡುವೆ ಇದು ಹೊಸ ಪ್ರಕರಣವಲ್ಲ ಲಾಕ್ ಡೌನ್ ಅವಧಿಯಲ್ಲಿ ನಡೆದ ಹಳೆಯ ಪ್ರಕರಣ ಎಂದು ಗೊತ್ತಾಗಿದೆ. ಜೊತೆಗೆ ಈ ಪ್ರಕರಣದ ಬಗ್ಗೆ ದರ್ಶನ್ ಅವರಿಗಿಂತಲೂ ನಿರ್ಮಾಪಕ ಉಮಾಪತಿ ಅವರಿಗೆ ಹೆಚ್ಚಿನ ಮಾಹಿತಿ ಇರುವಂತಿದೆ.
ಈ ನಡುವೆ ಪ್ರಕರಣ ತನಿಖಾಧಿಕಾರಿ ಮುಂದೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ದರ್ಶನ್, ಸಣ್ಣ ಘಟನೆಯೊಂದು ಈ ಹಿಂದೆ ನಡೆದಿತ್ತು. ಈ ಬಗ್ಗೆ ಒಂದು ದಾಖಲೆ ಸಿಕ್ಕಿದೆ ಬನ್ನಿ ಎಂದು ಪೊಲೀಸರು ಹೇಳಿದ್ದರು. ಹೀಗಾಗಿ ಎಸಿಪಿ ಕಚೇರಿಗೆ ಬಂದಿದ್ದೇನೆ. ನನಗೆ ಯಾರು ಕೂಡಾ ಬ್ಲ್ಯಾಕ್ ಮೇಲ್ ಮಾಡಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ನನಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪೊಲೀಸರ ತನಿಖೆ ಒಂದು ಹಂತಕ್ಕೆ ಬರಲಿ ನಾನೇ ಮಾಹಿತಿ ಹಂಚಿಕೊಳ್ಳುತ್ತೇನೆ. ಪ್ರಕರಣದಲ್ಲಿ ಯಾರೇ ಇದ್ರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ದರ್ಶನ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ, ನಾನೇ ಬೆಂಗಳೂರಿನ ಜಯನಗರ ಠಾಣೆಯಲ್ಲಿ ದೂರು ನೀಡಿದ್ದೇನೆ. ಆ ಮಹಿಳೆ ಇಷ್ಟೊಂದು ಯಾಕೆ ಮುಂದುವರಿದಿದ್ದಾರೆ ಅನ್ನುವುದು ತನಿಖೆಯಿಂದ ಗೊತ್ತಾಗಲಿದೆ. ದರ್ಶನ್ ಹಾಗೂ ಅವರ ಇತರ ಸ್ನೇಹಿತರ ಹೆಸರು ಇಲ್ಲಿ ದುರ್ಬಳಕೆಯಾಗುತ್ತಿದೆ. ಈ ಬಗ್ಗೆಯೇ ದೂರು ನೀಡಲಾಗಿದೆ. ಇದು ಎರಡು ತಿಂಗಳಿನಿಂದ ನಡೆಯುತ್ತಿರುವ ಘಟನೆ ಅಂದಿದ್ದಾರೆ.
Discussion about this post