ಹಿಂದೆಲ್ಲಾ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಅಂದರೆ ಅದು ಕೋಮು ಸಾಮರಸ್ಯ ಕಾಪಾಡಿಕೊಳ್ಳುವುದು ಪೊಲೀಸರಿಗೆ ಸವಾಲು ಅನ್ನಿಸಿಕೊಂಡಿತ್ತು.
ಆದರೆ ಈಗ ನಗರ ಬೆಳೆದಿದೆ. ಹೊಸ ಕಳ್ಳರು, ಖದೀಮರು ಹುಟ್ಟಿಕೊಂಡಿದ್ದಾರೆ. ಹಟ್ಟಿಗೆ ನುಗ್ಗಿ ದನ ಕದಿಯುತ್ತಾರೆ, ಹಗಲು ಹೊತ್ತಿನಲ್ಲೇ ಕಳ್ಳತನವಾಗುತ್ತದೆ. ಮಾದಕ ವಸ್ತುಗಳ ಜಾಲ ಕರಾವಳಿಯನ್ನು ಹಿಂಡಿ ಹಿಪ್ಪೆ ಮಾಡಿದೆ.
ಈ ಎಲ್ಲವನ್ನೂ ನಿಯಂತ್ರಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತರಾಗಿ ಬಂದವರು ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮ ಪ್ರಾರಂಭಿಸಿದ್ದರು. ವಾರಕ್ಕೊಮ್ಮೆ ಫೋನ್ ಇನ್ ನಡೆಯುತ್ತದೆ. ಜನ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.
ಅದರಲ್ಲೂ ಸಂದೀಪ್ ಪಾಟೀಲ್ ಆಯುಕ್ತರಾಗಿ ಬಂದ ಬಳಿಕ ಮಂಗಳೂರು ನಗರದಲ್ಲಿ ರೌಡಿಗಳು, ಕಳ್ಳರು, ಖದೀಮರು ಹೀಗೆ ಸಮಾಜ ಘಾತುಕರ ಪರೇಡ್ ನಡೆಸಲಾಗಿತ್ತು. ಇದರಿಂದ ಒಂದಿಷ್ಟು ಬಿಸಿ ಮುಟ್ಟಿತ್ತು. ಮಾದಕ ವಸ್ತುಗಳ ಜಾಲಕ್ಕೂ ಬ್ರೇಕ್ ಬಿದ್ದಿತ್ತು. ಅವರು ಎತ್ತಂಗಡಿಯಾದ ಬೆನ್ನಲ್ಲೇ ಪುಂಡು ಪೋಕರಿಗಳು ತಲೆ ಎತ್ತಿದ್ದರು.
ಆದರೆ ಇದೀಗ ಬಂದಿರುವ ಪೊಲೀಸ್ ಆಯುಕ್ತ ಡಾ.ಹರ್ಷ ತಮ್ಮ ಕನಸಿನ ಯೋಜನೆಯಾಗಿರುವ ನನ್ನ ಗಸ್ತು ನನ್ನ ಹೆಮ್ಮೆ ಅನ್ನುವ ಡಿಫರೆಂಟ್ ಯೋಜನೆಯೊಂದನ್ನು ಕರಾವಳಿ ನಗರದಲ್ಲಿ ಪ್ರಾರಂಭಿಸಿದ್ದಾರೆ.
ಈ ವಿನೂತನ ಯೋಜನೆ ಜನರಿಂದ ಜನರಿಗಾಗಿ ಜನರಿಗೋಸ್ಕರ ರೂಪಿಸಲಾಗಿದೆ. ಬೀಟ್ ವ್ಯವಸ್ಥೆ ಅನ್ನುವುದು ಇಲಾಖೆಯ ತಳ ಹಂತದ ಒಂದು ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಿದರೆ ಬಹುತೇಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಅನ್ನುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ.
ಪ್ರಸ್ತುತ ನಗರದಲ್ಲಿ 756 ಬೀಟ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಬೀಟ್ನಲ್ಲಿ ಒಬ್ಬರು ಕಾನ್ಸ್ಟೇಬಲ್ ಇರುತ್ತಾರೆ. ಅವರಿಗೆ ಸರಕಾರದ ವತಿಯಿಂದ ಒಂದು ಮೊಬೈಲ್ ನೀಡಲಾಗಿದೆ. ಪ್ರತಿ ಬೀಟ್ ಪೊಲೀಸರು ಅವರ ವ್ಯಾಪ್ತಿಯ 250 ಮಂದಿ ಸಾರ್ವಜನಿಕರನ್ನು ಒಳಗಂಡ ಒಂದು ವ್ಯಾಟ್ಸ್ಅಪ್ ಗ್ರೂಪ್ನ್ನು ಮಾಡಿದ್ದಾರೆ. ಆಯಾ ವ್ಯಾಪ್ತಿಯ ದೂರು, ಸಲಹೆಗಳನ್ನು ಈ ಗ್ರೂಪ್ಗಳಲ್ಲಿ ಹಾಕಿದರೆ ತಕ್ಷಣ ಇಲಾಖೆ ಸ್ಪಂದಿಸಲಿದೆ.
ಪೊಲೀಸ್ ಬೀಟ್ ವ್ಯವಸ್ತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯುವ ಉದ್ದೇಶದಿಂದ ಹೊಸ ಆ್ಯಪ್ನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಆ್ಯಪ್ ಮೂಲಕ ಆಸಕ್ತ ಸಾರ್ವಜನಿಕರು ಬೀಟ್ ಪೊಲೀಸರ ಜೊತೆಯಲ್ಲಿ ಕೈಜೋಡಿಸಬಹುದಾಗಿದೆ.
“ನನ್ನ ಗಸ್ತು ನನ್ನ ಹೆಮ್ಮೆ”,
ಮಂಗಳೂರು ನಗರ ಪೊಲೀಸರು ನಗರದ ಗಸ್ತು ವ್ಯವಸ್ಥೆಯನ್ನು ಸಬಲಗೊಳಿಸುವತ್ತ ಒಂದು ಹೊಸ ಯೋಜನೆಯನ್ನು ಈಗ ಜಾರಿಗೆ ತಂದಿರುತ್ತಾರೆ. ಈ ಯೋಜನೆಯ ಹೆಸರು “ನನ್ನ ಗಸ್ತು ನನ್ನ ಹೆಮ್ಮೆ”, ಈ ಯೋಜನೆಯ ವೈಶಿಷ್ಟತೆ ಏನೆಂದರೆ ಈ ಇಡೀ ನಗರವನ್ನು ಚಿಕ್ಕದಾದ ಬೀಟ್ಗಳನ್ನಾಗಿ ವಿಂಗಡಿಸಿ ಪ್ರತಿಯೊಂದು ಬೀಟ್ಗೆ ಒಬ್ಬ ಕಾನ್ಸ್ಟೇಬಲ್ ಅಥವಾ ಹೆಡ್ ಕಾನ್ಸ್ಟೇಬಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿರುತ್ತದೆ.
ಹಾಗೆಯೇ ಪ್ರತೀ ಬೀಟ್ಗೆ ಒಂದು ವಾಟ್ಸಪ್ ಗ್ರೂಪ್ ರಚಿಸಿ ಅದರಲ್ಲಿ ನಾಗರಿಕ ಸಮಾಜದ ಎಲ್ಲ ವರ್ಗದ, ಎಲ್ಲ ಜಾತಿಯ, ಎಲ್ಲ ಸಮುದಾಯದ ಹಾಗೂ ಎಲ್ಲ ವಯಸ್ಸಿನ ಜವಾಬ್ದಾರಿಯು ನಾಗರಿಕರನ್ನು ಸದಸ್ಯರನ್ನಾಗಿ ನೊಂದಣಿಸಿ ದಿನಂಪ್ರತಿ ಅವರಿಂದ ಸಲಹೆ ಸೂಚನೆ ಮಾಹಿತಿಗಳನ್ನು ವಿನಿಮಯಮಾಡಿಕೊಳ್ಳುವ ವೇದಿಕೆಯನ್ನಾಗಿ ಈ ವಾಟ್ಸಾಪ್ ಗ್ರೂಪನ್ನು ಬಳಸಲಾಗುತ್ತದೆ.
ಈ ಯೋಜನೆಯ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಸಂಬಂಧಪಟ್ಟ ಬೀಟ್ ಕಾನ್ಸ್ಟೇಬಲ್ ಜೊತೆಗೂಡಿ ಮಂಗಳೂರು ನಗರ ಆಯುಕ್ತಾಲಯದ ಎಲ್ಲ ವರಿಷ್ಟ ಪೊಲೀಸ್ ಅಧಿಕಾರಿಗಳು ಮಂಗಳೂರು ನಗರ ಕಮಿಷನರ್ ರವರನ್ನು ಒಳಗೊಂಡಂತೆ ಪೊಲೀಸ್ ಸಬ್ಇನ್ಸೆಕ್ಟರ್ ವರೆಗೆ ತಿಂಗಳಿಗೊಂದು ದಿನ ಒಂದು ಬೀಟ್ನ ಕರ್ತವ್ಯವನ್ನು ಈ ಹಿರಿಯ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಇದರಿಂದ ಹಿರಿಯ ಅಧಿಕಾರಿಗಳಿಗೆ ಸಹ ಸ್ಥಳಿಯವಾದ ಸಮಸ್ಯೆಗಳ ನೇರ ಪರಿಚಯ ಆಗುವುದಲ್ಲದೇ ಸ್ಥಳಿಯರ ಪ್ರತಿಯೊಂದು ವಿಚಾರದ ಬಗ್ಗೆ ನಿಲುವುಗಳನ್ನು ತಿಳಿದುಕೊಂಡು ಪೊಲೀಸ್ ಸೇವೆಗಳನ್ನು ಹೆಚ್ಚು ಸಮಂಜಸವಾಗಿ ಜನರಿಗೆ ಸಲ್ಲಿಸುವಲ್ಲಿ ಸಹಾಯಕಾರಿಯಾಗಲಿದೆ.
ಈ ವೈಶಿಷ್ಟ್ಯತೆವುಳ್ಳ ಈ ಹೊಸ ಬೀಟ್ ವ್ಯವಸ್ಥೆಯಿಂದ ಜನರಿಗೆ ಪಾಸ್-ಪೋಟ್ ವೆರಿಫಿಕೇಶನ್, ಕೆಲಸಗಳ ಕುರಿತಾದ ವೆರಿಫಿಕೇಶನ್ ಮುಂತಾದ ಪೊಲೀಸ್ ಸೇವೆಗಳನ್ನು ಪಡೆಯುವಲ್ಲಿ ಹೆಚ್ಚಿನ ಸಹಾಯ ಸಿಗಲಿದೆ.
ಸ್ಥಳೀಯ ಬೀಟ್ ಮುಖ್ಯಸ್ಥ ಕಾನ್ಸ್ಟೇಬಲ್ ಅಥವಾ ಹೆಡ್ ಕಾನ್ಸ್ಟೇಬಲ್ ಅವರು ಈ ಸೇವೆಗಳನ್ನು ನೇರವಾಗಿ ನಾಗರಿಕರ ಬಾಗಿಲಿಗೆ ತಲುಪಿಸುವಲ್ಲಿ ಈ ಒಂದು ಹೊಸ ಯೋಜನೆ ಸಹಕಾರಿಯಾಗಲಿದೆ.
ಹಾಗಾಗಿ ಹೆಚ್ಚು ಹೆಚ್ಚು ಜನ ಈ ಹೊಸ ಯೋಜನೆಗೆ ಕೈಜೋಡಿಸಿದಲ್ಲಿ ಅತ್ಯಂತ ಸಮರ್ಪಕವಾಗಿ ನಗರ ವ್ಯಾಪ್ತಿಯ ಪೊಲೀಸ್ ಸೇವೆಗಳನ್ನು ಒದಗಿಸುವಲ್ಲಿ ನಗರ ಪೊಲೀಸರಿಗೆ ಸಹಕಾರಿಯಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ಎಲ್ಲ ನಾಗರಿಕರಲ್ಲಿ ಸವಿನಯವಾದ ಮನವಿ ಏನೆಂದರೆ ಎಲ್ಲರೂ ಈ ಯೋಜನೆಯನ್ನು ತಮ್ಮದೇ ಯೋಜನೆಯೆಂದು ಪರಿಗಣಿಸಿ, ಇದನ್ನು ಸದೃಡಗೊಳಿಸಲು ಕೈಜೋಡಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದಲ್ಲಿ ಮಂಗಳೂರು ನಗರ ಪೊಲೀಸ್ ಹೆಚ್ಚಿನ ದಕ್ಷತೆಯಿಂದ ಹೆಚ್ಚಿನ ಸಕ್ಷಮತೆಯಿಂದ ಪೊಲೀಸ್ ಸೇವೆಗಳನ್ನು ಸಲ್ಲಿಸುವಲ್ಲಿ ಸಹಾಯಕಾರಿಯಾಗಲಿದೆ.
ಯೋಜನೆ ಜಾರಿಯಾದ ಬೆನ್ನಲ್ಲೇ ಪೊಲೀಸ್ ಆಯುಕ್ತ ಡಾ. ಹರ್ಷ ಅವರೇ ರಸ್ತೆಗಿಳಿದಿದ್ದು, ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಗಸ್ತು ಸಿಬ್ಬಂದಿ ಈಶ ಪ್ರಸಾದ್ ಜೊತೆಗೆ ಎರಡು ಗಂಟೆಗಳ ಕಾಲ ಕಾಲ್ನಡಿಗೆಯಲ್ಲೇ ಏರಿಯಾ ಸುತ್ತಾಡಿದರು. ಹಲವು ಮನೆ, ಅಂಗಡಿ, ಮಸೀದಿ, ಚರ್ಚು, ದೇವಸ್ಥಾನಗಳಿಗೆ ಭೇಟಿ ಕೊಟ್ಟು ಬೀಟ್ ಬಗ್ಗೆ ಮಾಹಿತಿ ತಿಳಿಸಿದರು.
Discussion about this post