ಬೆಂಗಳೂರು : ಮೊಟ್ಟೆ ವಿಚಾರದಲ್ಲಿ ಭ್ರಷ್ಟಚಾರದ ಆರೋಪ ಬಂದ ಬೆನ್ನಲ್ಲೇ ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಹೊರಗಿಡಬೇಕಾಗಿತ್ತು. ಆಗ ಬಿಜೆಪಿಗೆ ಉಳಿದವರನ್ನು ಟೀಕಿಸುವ ನೈತಿಕತೆ ಇರುತ್ತಿತ್ತು. ಆದರೆ ಜೊಲ್ಲೆಯವರ ಮೇಲೆ ಬಂದಿರುವ ಸುಳ್ಳು ಎಂದು ಸಾಬೀತಾಗುವ ಮುನ್ನವೇ ಅವರನ್ನು ಬೊಮ್ಮಾಯಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಹಾಗೇ ಸೇರಿಸಿಕೊಂಡಿದ್ರೆ ಪರವಾಗಿರಲಿಲ್ಲ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನ ತನಕ ಝೀರೋ ಟ್ರಾಫಿಕ್ ಮೂಲಕ ಕರೆಸಿ ಸಚಿವ ಸ್ಥಾನ ನೀಡಲಾಗಿತ್ತು. ಈ ಮೂಲಕ ಬೊಮ್ಮಾಯಿ ಅವರ ಮೇಲಿಟ್ಟ ಅಷ್ಟು ನಿರೀಕ್ಷೆಗಳು ಮಣ್ಣು ಪಾಲಾಗಿತ್ತು.
ಇದೀಗ ಝೀರೋ ಟ್ರಾಫಿಕ್ ವಿಚಾರ ಹೈಕೋರ್ಟ್ ಮೆಟ್ಟಿಲು ಹತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿಕಲಾ ಜೊಲ್ಲೆ ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮದವರು ಕೇಳಿದ ಬಳಿಕವೇ ನನಗೆ ವಿಷಯ ಗೊತ್ತಾಯ್ತು ಅಂದಿದ್ದಾರೆ. ಇದನ್ನು ನಂಬುವ ಜನ ಇನ್ನೂ ಜಗತ್ತಿನಲ್ಲಿ ಇದ್ದಾರೆ ಅಂದ್ರೆ ಶಶಿಕಲಾ ಜೊಲ್ಲೆಯವರು ಹೇಳಿದ್ದನ್ನೂ ನಂಬಲು ಸಾಧ್ಯವಿದೆ.
ಈ ನಡುವೆ ಸಚಿವರಿಗೆ ಹೀಗೆ ಝೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಿದ್ದನ್ನು ಪ್ರಶ್ನಿಸಿ ವಕೀಲ ಜಿ. ಬಾಲಾಜಿ ನಾಯ್ಡು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಈಗಾಗಲೇ ಸೂಚನೆ ನೀಡಿದೆ.
Discussion about this post