ಬೆಂಗಳೂರು : ಶಶಿಕಲಾ ಜೊಲ್ಲೆ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾದ ಸಂದರ್ಭದಲ್ಲಿ ಸಾಕಷ್ಟು ನಿರೀಕ್ಷೆಗಳಿತ್ತು. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಟ್ಟಿನಲ್ಲಿ ಅವರು ಮಾಡಿದ್ದು ಕಾರ್ಯ ಅಷ್ಟಕಷ್ಟೇ. ಕನಿಷ್ಟ ಪಕ್ಷ ಉತ್ತರ ಕರ್ನಾಟಕ ಭಾಗದ ಅಪೌಷ್ಟಿಕತೆ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಬಹುದಿತ್ತು. ಮಹಿಳೆಯರನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ವಿನೂತನ ಅನ್ನಿಸುವ ಐಡಿಯಾಗಳ ಮೂಲಕ ಜನರಿಗೆ ಹತ್ತಿರವಾಗಬಹುದಿತ್ತು.
ಈ ನಡುವೆ ಖಾಸಗಿ ವಾಹಿನಿಯೊಂದು ನಡೆಸಿದ್ದ ಸ್ಟಿಂಗ್ ಆಪರೇಷನ್ ನಲ್ಲಿ ಮೊಟ್ಟೆ ಖರೀದಿಯ ಗೋಲ್ ಮಾಲ್ ವಿಚಾರ ಬಹಿರಂಗಗೊಂಡಿತು. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿದೆ. ಇದೇ ಸಂದರ್ಭದಲ್ಲಿ ಶಶಿಕಲಾ ಜೊಲ್ಲೆ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಸ್ವಚ್ಛ ಸಂಪುಟ ಕಟ್ಟುವ ಉತ್ಸಾಹದಲ್ಲಿದ್ದ ಬೊಮ್ಮಾಯಿಯವರು ಶಶಿಕಲಾ ಜೊಲ್ಲೆಯವರನ್ನು ಸಂಪುಟದಿಂದ ಹೊರಗಿಡಲು ಬಯಸಿದ್ದರು.
ಆದರೆ ಕೊನೆಯ ಕ್ಷಣದಲ್ಲಿ ಡೆಲ್ಲಿಯಲ್ಲಿ ಜೊಲ್ಲೆಯವರು ನಡೆಸಿದ ಪ್ರಯತ್ನ ಫಲ ಕೊಟ್ಟಿತು. ಬೊಮ್ಮಾಯಿ ಸಂಪುಟ ಸಚಿವರ ಪಟ್ಟಿಯಲ್ಲಿ ಕೊನೆಯದಾಗಿ ಹೆಸರು ಕೂಡಾ ಸೇರಿಕೊಂಡಿತು. ಹೀಗಾಗಿ ಡೆಲ್ಲಿಯಿಂದ ಹರಿಬಿರಿಯಲ್ಲಿ ದೌಡಾಯಿಸಿ, ಝೀರೋ ಟ್ರಾಫಿಕ್ ನಲ್ಲಿ ರಾಜಭವನ ತಲುಪಿ ಮಂತ್ರಿಯೂ ಆದರು.
ಆದರೆ ಇದೀಗ ಜೊಲ್ಲೆಯವರು ರಾಜ್ಯದ ಮೊದಲ ಮಹಿಳಾ ಹಜ್ ಸಚಿವೆ ಅನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಹಿಂದೆ ಮುಸ್ಲಿಂ ಸಮುದಾಯದಿಂದ ಬಂದವರಿಗೆ ಈ ಖಾತೆಯನ್ನು ನೀಡುವ ಸಂಪ್ರದಾಯವಿತ್ತು. ಆದರೆ ಈ ತನಕ ಮಹಿಳೆಯರು ಈ ಖಾತೆಯನ್ನು ನಿಭಾಯಿಸಿರಲಿಲ್ಲ. ಇದೀಗ ಶಶಿಕಲಾ ಜೊಲ್ಲೆಯವರು ಮುಜರಾಯಿ ಮತ್ತು ಹಜ್ ಖಾತೆಯನ್ನು ನಿಭಾಯಿಸಬೇಕಾಗಿದೆ. ಎರಡೂ ಖಾತೆಗಳು ಪರಸ್ಪರ ಸಂಬಂಧ ಇರುವ ಖಾತೆಗೂ ಕೂಡಾ ಹೌದು.
ಆದರೆ ಮುಜರಾಯಿ ಖಾತೆ ಪಡೆದವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಅನ್ನುವ ನಂಬಿಕೆಯೊಂದು ಕರ್ನಾಟಕದಲ್ಲಿದೆ. ಇನ್ನು ತಮ್ಮ ಮೇಲಿನ ಮೊಟ್ಟೆ ಖರೀದಿ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ಅವರು,
ತಮ್ಮ ಮೇಲೆ ಬಂದಿರುವ ಮೊಟ್ಟೆ ಖರೀದಿ ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಕೀಯದಲ್ಲಿದ್ದಾಗ ಹೆಣ್ಣು ಮಕ್ಕಳು ಈ ಸ್ಥಾನಕ್ಕೆ ಬಂದು ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವಾಗ ಅನೇಕ ಶತ್ರುಗಳು, ಹಿತಶತ್ರುಗಳು ಇರುತ್ತಾರೆ, ಮುಂದೆ ಹೋಗಬಾರದೆಂದು ಷಡ್ಯಂತ್ರ ಮಾಡಿರುತ್ತಾರೆ. ಅವ್ಯವಹಾರ ಆರೋಪದ ಬಗ್ಗೆ ಯಾವುದೇ ತನಿಖೆಯಾದರೂ ಎದುರಿಸಲು ಸಿದ್ದಳಿದ್ದೇನೆ ಎಂದರು.
ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡುವ ಅಗತ್ಯವೂ ಇಲ್ಲ, ತನಿಖೆಯಾಗಿ ವರದಿ ಹೊರಬರಲಿ, ಎಲ್ಲವನ್ನೂ ಎದುರಿಸಲು ಸಿದ್ದಳಿದ್ದೇನೆ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ, ನನ್ನ ವಿರುದ್ಧ ಆರೋಪ ಮಾಡೋದಿಕ್ಕೆ ಶತ್ರುಗಳು ನಡೆಸಿರುವ ಷಡ್ಯಂತ್ರವನ್ನು ಹೆಣೆದಿದ್ದಾರೆ ಎಂದು ಆರೋಪಿಸಿದರು
Discussion about this post