ರಾಯಚೂರು : ಕೊರೋನಾ ಮಹಾಮಾರಿ ಅಟ್ಟಹಾಸದ ನಡುವೆ ಕಳೆದ ವಾರವಷ್ಟೇ ಮಂತ್ರಾಲಯದ ಬಾಗಿಲು ತೆರೆಯಲಾಯ್ತು. ಹೀಗಾಗಿ ಒಂದ್ಸಲ ಗುರುಗಳ ದರ್ಶನ ಪಡೆಯೋಣ ಎಂದು ಸಾಕಷ್ಟು ಜನ ಮಂತ್ರಾಲಯ ಕಡೆಗೆ ಧಾವಿಸಿದ್ದರು.
ಈ ನಡುವೆ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆ ಇಡ ಮಂತ್ರಾಲಯ ಪ್ರದೇಶವನ್ನು ಅಸ್ತವ್ಯಸ್ತಗೊಳಿಸಿದೆ. ಮಳೆಯ ಅಬ್ಬರ ಹೇಗಿತ್ತು ಅಂದ್ರೆ 2009ರ ಪ್ರವಾಹವನ್ನು ನೆನಪಿಸಿತ್ತು.
ಭಾರಿ ಪ್ರಮಾಣದ ಮಳೆಯಿಂದ ಹಳ್ಳಕೊಳ್ಳ ತುಂಬಿ ಇಂದು ಮುಂಜಾನೆಯಿಂದ ಗುರುರಾಯರ ಸನ್ನಿಧಿ ಮಂತ್ರಾಲಯದ ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿತ್ತು. ಕರ್ನಾಟಕ ಅತಿಥಿ ಗೃಹದ ರಸ್ತೆ ಅಕ್ಕ,ಪಕ್ಕದಲ್ಲಿ ನೀರು ತುಂಬಿ ಅತಿಥಿ ಗೃಹ ಜಲಾವೃತಗೊಂಡಿತ್ತು.
ತಗ್ಗು ಪ್ರದೇಶದಲ್ಲಿ ನಿಲ್ಲಿಸಿದ ವಾಹನಗಳು ಮಳೆ ನೀರಿನಲ್ಲಿ ಮುಳುಗಿದ್ದವು. ಹೀಗಾಗಿ ಭಕ್ತರು ನಡು ಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಬೇಕಾಯ್ತು. ಆದರೆ ಮಂತ್ರಾಲಯದ ಪಕ್ಕದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿ ನೀರಿನ ಹರಿವು ಸಾಮಾನ್ಯವಾಗಿತ್ತು. ಆದರೆ ಆದರ ಮೇಲ್ಭಾಗದ ಗ್ರಾಮಗಳ ಹಳ್ಳಗಳು ತುಂಬಿ ಹರಿದ ಪರಿಣಾಮ ಮಂತ್ರಾಲಯ ಜಲಪ್ರಳಯವನ್ನು ಕಾಣಬೇಕಾಯ್ತು.
ಈ ನಡುವೆ ಕಲ್ಯಾಣ ಮಂಟಪಗೆ ನೀರು ನುಗ್ಗಿದರಿಂದ ಮದುವೆ ಸಮಾರಂಭಕ್ಕೆ ಬಂದವರು ಪರದಾಡಿದರು. ಏಕಾಏಕಿ ನೀರು ಹರಿದು ಬಂದ ಕಾರಣ ನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಹೀಗಾಗಿದ್ದು 3 ಗಂಟೆಯ ಹೊತ್ತಿಗೆ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ.
Discussion about this post