ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಇಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದಾರೆ.
ಬಾಳೆಎಲೆಯಲ್ಲಿ ಊಟ ಕಟ್ಟಿಕೊಡಿ ಎಂದು ಆನ್ ಲೈನ್ ಫುಡ್ ಡೆಲಿವರಿ ಮತ್ತು ಹೊಟೇಲ್ ಮಾಲೀಕರಿಗೆ ಮನವಿ ಮಾಡುವ ಮೂಲಕ ಸದ್ದು ಮಾಡಿದ್ದಾರೆ.
ಮೊದಲ ಬಾರಿಗೆ ಶಾಸಕರಾದರೂ ಅದ್ಯಾವ ಹಿರಿಯ ಶಾಸಕರಿಗೂ ಕಡಿಮೆ ಇಲ್ಲದಂತೆ ಕೆಲಸ ಮಾಡಿದ ಹಿರಿಮೆ ಕಾಮತ್ ಅವರದ್ದು.
ಶಾಸಕರಾಗಿ ಒಂದೆರೆಡು ತಿಂಗಳ ಅವಧಿಯಲ್ಲಿ ಮಂಗಳೂರಿನಲ್ಲಿ ಸುರಿದ ಮಳೆ ಬುದ್ದಿವಂತರ ನಗರಿಯನ್ನು ಇನ್ನಿಲ್ಲದಂತೆ ಕಾಡಿತ್ತು. ನಡು ರಾತ್ರಿ ಅನ್ನುವುದನ್ನು ಲೆಕ್ಕಿಸದೆ ಜನರ ಸಂಕಷ್ಟಕ್ಕೆ ಧಾವಿಸಿದ ಕಾಮತ್ ಶಾಸಕರಂದ್ರೆ ಹೀಗಿರಬೇಕು ಅನ್ನುವುದಕ್ಕೆ ಸಾಕ್ಷಿಯಾಗಿದ್ದರು.
ಪೆಟ್ರೋಲ್ ಹಾಕಬೇಕಾದ ಕಾರಿಗೆ ಡಿಸೇಲ್ ತುಂಬಿಸಿದ ಶಾಸಕರಿಗಿಂತ ಇವರೇ ಬೆಟರ್. ನಾವು ಹಾಕಿದ ಮತ ವ್ಯರ್ಥವಾಗಿಲ್ಲ ಅನ್ನುವ ನೆಮ್ಮದಿ ಮತದಾರರಿಗಿತ್ತು.
ವಿದೇಶದಲ್ಲಿ ಕರಾವಳಿ ಹುಡುಗರು ತಮ್ಮದಲ್ಲ ತಪ್ಪಿಗೆ ಸಿಲುಕಿಕೊಂಡಾದ ಉಸ್ತುವಾರಿ ಸಚಿವ ಖಾದರ್ ಎಚ್ಚೆತ್ತುಕೊಳ್ಳುವ ಮುನ್ನ ಸಂಕಷ್ಟದಲ್ಲಿರುವ ಮಂದಿಗೆ ಧಾವಿಸಿದ್ದು ಇದೇ ವೇದವ್ಯಾಸ ಕಾಮತ್.
ಹೀಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರ ಕಾರ್ಯವೈಖರಿಯನ್ನು ಟೀಕಿಸಿದ್ರೆ ಖಂಡಿತಾ ಪರಮಾತ್ಮನೂ ಮೆಚ್ಚಲಾರ.
ಆದರೆ ಇಂದು ವೇದವ್ಯಾಸ ಕಾಮತ್ ಬಾಳೆ ಎಲೆಯಲ್ಲಿ ಊಟ ಕಟ್ಟಿಕೊಡಿ ಅಂದ್ರಲ್ಲ, ಇದ್ಯಾಕೋ ಸ್ವಲ್ಪ ಹೆಚ್ಚಾಯ್ತು ಅನ್ನಿಸುತ್ತದೆ. ಕಾಮತ್ ಅವರದ್ದು ಹೆಚ್ಚಾಗಿಲ್ಲ. ಕಾಮತ್ ಹೇಳಿದ ಮಾತುಗಳನ್ನು ತಮ್ಮ ಸಾಮಾಜಿಕ ಜಾಲ ಖಾತೆಯಲ್ಲಿ ಶೇರ್ ಮಾಡಿದ್ರಲ್ಲ ಅವರದ್ದು.
ಕಾಮತ್ ಅವರ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು. ಕರಾವಳಿ ಸಂಪ್ರದಾಯದಂತೆ ಬಾಳೆ ಎಲೆಯಲ್ಲಿ ಊಟ ಕೊಟ್ಟರೆ ನಗರದ ಹಲವು ಸಮಸ್ಯೆಗಳು ನೀಗುತ್ತದೆ. ಬಾಳೆಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಸಾಕಷ್ಟು ಉತ್ತಮ ( ಒಂದೆರೆಡು ದಿನದಲ್ಲಿ ಈ ಬಗ್ಗೆ ವಿಶೇಷ ಲೇಖನ ಪ್ರಕಟವಾಗಲಿದೆ)
ನಗರದ ಕಸ ಸಮಸ್ಯೆಗೆ ಇದರಿಂದ ದೊಡ್ಡ ರಿಲೀಫ್. ಪಾಸ್ಟಿಕ್ ತಟ್ಟೆ ಲೋಟದಿಂದ ಬೆಟ್ಟದಂತೆ ಬೆಳೆಯುತ್ತಿರುವ ಕಸದ ರಾಶಿ ಕಡಿಮೆಯಾಗುತ್ತದೆ. ಬಾಳೆ ಎಲೆ ಮಣ್ಣಿನಲ್ಲಿ ಕೊಳೆಯುವ ಕಾರಣದಿಂದ ಗೊಬ್ಬರವೂ ಹೌದು.
ಆದರೆ ಕಾಮತ್ ಹೇಳಿದ ಮಾತುಗಳಿಗೆ ಭೇಷ್ ಅಂದು ಶೇರ್ ಮಾಡಿದ್ರಲ್ಲ. ಅವೆರೆಷ್ಟು ಸಲ ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ ಕೇಳಿ.
ನಿಜಕ್ಕೂ ಶಾಸಕರು ಹೇಳಿದ ಮಾತುಗಳಿಗೆ ಗೌರವವಿತ್ತು ಅನ್ನುವುದಾದರೆ ನಾಳೆಯಿಂದ ಬಾಳೆ ಎಲೆಯಲ್ಲಿ ಊಟ ಕೊಡುವ ಹೊಟೇಲ್ ಗಳಿಗೆ ಹೋಗಿ. ಅಸಾಧ್ಯ ಅನ್ನುವುದಾದರೆ ನಮಗೆ ಬಾಳೆ ಎಲೆಯಲ್ಲಿ ಊಟ ಬೇಕು ಎಂದು ಮಾಲೀಕರಲ್ಲಿ ಮನವಿ ಮಾಡಿ. ಬಾಳೆ ಎಲೆಯಲ್ಲಿ ಊಟ ಅಸಾಧ್ಯ ಅನ್ನುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹೊಟೇಲ್ ಫೋಟೋ ಹಾಕಿ ಉಗಿಯಿರಿ. ಖಂಡಿತಾ ಅವರು ದಾರಿಗೆ ಬರುತ್ತಾರೆ.
ನಿಜಕ್ಕೂ ಶಾಸಕರ ಮಾತಿಗೆ ಬೆಂಬಲವಿದೆ ಅನ್ನುವುದಾದರೆ ನಿಮ್ಮ, ನಿಮ್ಮ ಮನೆಯ, ನಿಮ್ಮ ಸಂಬಂಧಿಕರ ಮದುವೆ ಸೇರಿದಂತೆ ಇನ್ನಿತರ ಫಂಕ್ಷನ್ ಗಳಲ್ಲಿ ಬಾಳೆ ಎಲೆಯಲ್ಲಿ ಊಟ ಹಾಕಿ. ಈ ಮೂಲಕ ನಿಮ್ಮ ಶಾಸಕರ ಮಾತುಗಳನ್ನು ಗೌರವಿಸಿ.
ಇನ್ನು ಆನ್ ಲೈನ್ ಆಹಾರ ಡೆಲಿವರಿ ಸಂಸ್ಥೆಗಳು, ಶಾಸಕರು ಹೇಳಿದ ತಕ್ಷಣ ಆ ಸಂಸ್ಥೆಗಳು ಬಾಳೆ ಎಲೆಯಲ್ಲಿ ಊಟ ಕಟ್ಟಿಕೊಡುವುದಿಲ್ಲ.
ನೀವು ಶಾಸಕರ ಮಾತಿಗೆ ಸಮ್ಮತಿಸುವುದಾದರೆ ನಮ್ಮ ಮನೆಗೆ ಬಾಳೆ ಎಲೆಯಲ್ಲಿ ಕಟ್ಟಿದ ಆಹಾರ ಕೊಟ್ಟರೆ ಮತ್ರೆ ಆರ್ಡರ್ ಮಾಡುತ್ತೇವೆ. ಇಲ್ಲವಾದರೆ ನಿಮ್ಮ ಸೇವೆ ನಮಗೆ ಬೇಡ ಅನ್ನಿ. ಆ ತಾಕತ್ತು ನಿಮಗಿದ್ದರೆ ಮಾತ್ರ ಶಾಸಕರ ಹೇಳಿರುವ ಹೇಳಿಕೆಯನ್ನು ಶೇರ್ ಮಾಡಿ. ಆ ಯೋಗ್ಯತೆ ನಿಮಗಿಲ್ಲ ಅನ್ನುವುದಾದರೆ ಶಾಸಕರನ್ನು ಮೆಚ್ಚಿಸಲು ದಯವಿಟ್ಟು ಶೇರ್ ಮಾಡಬೇಡಿ.
ವೇದವ್ಯಾಸ್ ಕಾಮತ್ ಹೇಳಿರುವ ಮಾತುಗಳನ್ನು ಜಾರಿಗೆ ತರುವ ಜವಾಬ್ದಾರಿ ಅವರನ್ನು ಬೆಂಬಲಿಸುವ ಮಂದಿಯದ್ದು. ನಾಳೆಯಿಂದ ಶಪಥ ಮಾಡಿ ಹೊರಗಡೆ ಊಟ ಮಾಡುವುದಾದರೆ ಅದು ಬಾಳೆ ಎಲೆಯಲ್ಲಿ ಎಂದು. ಅದೆಷ್ಟೋ ಮಂದಿ ಜಾರಿಗೆ ತರ್ತಿರೋ ಕಮೆಂಟ್ ಮಾಡಿ.
Discussion about this post