ಮಂಗಳೂರು – ಬೆಂಗಳೂರು ನಡುವಣ ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುವ ಕರ್ನಾಟಕದ ಮೊದಲ ವಿಸ್ಟಾಡೋಮ್ ರೈಲು ಸಂಚಾರಕ್ಕೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ.
ವಿಸ್ಟಾಡೋಮ್ ಬೋಗಿಗಳಲ್ಲಿ ಕೂತು ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸುವಾಗ ಪ್ರಕೃತಿಯ ಸೊಬಗನ್ನು ಸವಿಯಬಹುದಾಗಿದ್ದು, ಫೋಟೋಗ್ರಾಫರ್ ಗಳಿಗೂ ಈ ಬೋಗಿಯಲ್ಲಿ ಕೂಡಾ ಅನುಕೂಲ ಮಾಡಿಕೊಡಲಾಗಿದೆ. ಎತ್ತರದ ಪರ್ವತ, ಆಳವಾದ ಕಣಿವೆ, ಕಮರಿ ಹೀಗೆ ಪಶ್ಚಿಮ ಘಟ್ಟದ ಸೌಂದರ್ಯ ಸಿರಿಯನ್ನು ಈ ಮೂಲಕ ಕಣ್ತುಂಬಿಕೊಳ್ಳಬಹುದಾಗಿದ್ದು, ಮಳೆಗಾಲದ ಸಂದರ್ಭದ ಜರ್ನಿ ಅವಿಸ್ಮರಣೀಯವಾಗಿರುವುದರಲ್ಲಿ ಸಂಶಯವಿಲ್ಲ.
ಈ ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನವಿದೆ. ಈ ಬೋಗಿಯಲ್ಲಿ ಸಿಸಿಟಿವಿ, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ, ಎಲ್ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಸ್ಟೀಲ್ ಲಗೇಜ್ ಕಪಾಟುಗಳನ್ನು ಇರಿಸಲಾಗಿದೆ. ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ಗಳನ್ನು ಅಳವಡಿಸಲಾಗಿದೆ.
ಇನ್ನು ವಿಸ್ಟಾಡೋಮ್ ರೈಲು ಸಂಚಾರಕ್ಕೆ ಚಾಲನೆ ಕೊಟ್ಟು ಮಾತನಾಡಿ ನಳಿನ್ ಕುಮಾರ್ ಕಟೀಲ್ ಅವರು, ಈ ಯೋಜನೆಗೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ಹೇಳಿದರು.
Discussion about this post