ಮಂಗಳೂರಿನಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕರನ್ನು ಫಾರ್ಮೂಲ ಒನ್ ರೇಸ್ ಗೆ ಕಳುಹಿಸಬಹುದು ಅನ್ನುವ ಹಳೆಯ ಮಾತು. ಅದಕ್ಕೆ ಕಾರಣ ಈ ಭಾಗದಲ್ಲಿ ಬಸ್ ಓಡಿಸುವ ಶೈಲಿ. ಹಳ್ಳ ಗುಂಡಿ, ಸಿಗ್ನಲ್ ಗಳನ್ನು ಲೆಕ್ಕಿಸದೇ ಬಸ್ ಓಡಿಸುವುದರಲ್ಲಿ ಇವರು ನಿಸ್ಸೀಮರು.
ಇನ್ನು ಈ ಭಾಗದ ಚಾಲಕರ ಕಾಲು ಎಕ್ಸಿಲೇಟರ್ ಮೇಲಿದ್ದು, ಕೈಯೊಂದು ಹಾರ್ನ್ ಮೇಲಿಲ್ಲದ್ದರೆ ಬಸ್ ಮುಂದಕ್ಕೆ ಸಾಗುವುದೇ ಇಲ್ಲ. ಇಷ್ಟು ಮಾತ್ರವಲ್ಲ ಈ ಬಸ್ ಗಳಲ್ಲಿ ಜನರನ್ನು ತುಂಬಿಸುವ ಶೈಲಿ ನೋಡಿದ್ರೆ ಗಾಬರಿಯಾಗಲೇಬೇಕು. ಆಡು ಕುರಿಗಳನ್ನು ಈ ರೀತಿಯಲ್ಲಿ ತುಂಬಿಸಲ್ಲ, ಆ ಮಟ್ಟಿಗೆ ತುಂಬಿಸಿರುತ್ತಾರೆ. ಬಸ್ ಒಂದು ಕಡೆ ವಾಲಿದರೂ ಪರವಾಗಿಲ್ಲ ಜನ ಮಾತ್ರ ತುಂಬಿ ತುಳುಕುತ್ತಿರಬೇಕು. ಫುಟ್ ಬೋರ್ಡ್ ನಲ್ಲಿ ಜಾಗವಿಲ್ಲ ಅಂದ ಮೇಲೆ ಬಸ್ ಟಾಪ್ ಗೆ ಹತ್ತುವ ಏಣಿಯಲ್ಲೂ ಜನರನ್ನು ಬಟ್ಟೆಯಂತೆ ನೇತಾಡಿಸಿ ಟಿಕೆಟ್ ಪಡೆಯುತ್ತಾರೆ. ಇದು ನಿತ್ಯದ ಕಥೆ.
ಆದರೆ ಇದೀಗ ಕಾಲ ಬದಲಾಗಿದೆ ಸಾಮಾಜಿಕ ಜಾಲತಾಣಗಳ ಕಣ್ಣು ಎಲ್ಲರ ಮೇಲೆ ನೆಟ್ಟಿದೆ. ಮಂಗಳೂರು ಬಸ್ ಅನ್ನು ಬಿಡಲು ಸಾಧ್ಯವೇ.
ಮಂಗಳೂರು ಸೂರಜ್ ಜೈನ್ ಅನ್ನುವವರು ಹೀಗೆ ಬಸ್ ಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಸಿಕೊಂಡು ಹೋಗುತ್ತಿದ್ದ ಬಸ್ ಒಂದರ ಚಿತ್ರ ತೆಗೆದು ಟ್ವೀಟರ್ ನಲ್ಲಿ ಹಾಕಿದ್ದಾರೆ. ಹಾಗೇ ಹಾಕಿಲ್ಲ, ಮಂಗಳೂರು ಪೊಲೀಸ್ ಆಯುಕ್ತರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ.
ಇದನ್ನು ಕೆಲವೇ ನಿಮಿಷಗಳಲ್ಲಿ ಗಮನಿಸಿದ ಪೊಲೀಸ್ ಆಯುಕ್ತರು, ಬಸ್ ಚಾಲಕರ ಡಿಎಲ್ ಮತ್ತು ಬಸ್ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ನಾಳೆ ಬಸ್ ಮಾಲೀಕರು ಮುಂದೆ ಹೀಗೆ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದುಕೊಡಬಹುದು, ತಪ್ಪು ಚಾಲಕನದ್ದು ನಾನೇನು ಮಾಡಲಿ ಅನ್ನಬಹುದು, ಚಾಲಕರು ನಾನು ಗಮನಿಸಿಲ್ಲ, ನಿರ್ವಾಹಕ ( ಕಂಡಕ್ಟರ್) ನೋಡಬೇಕಾಗಿತ್ತು ಅನ್ನಬಹುದು. ಕಂಡಕ್ಟರ್ ಹಾಗೆಲ್ಲಾ ಬರಬೇಡಿ ಎಂದು ಪ್ರಯಾಣಿಕರಿಗೆ ಹೇಳಿದೆ, ಆದ್ರೂ ಕೇಳಲಿಲ್ಲ ಅನ್ನಬಹುದು.
ಹಾಗಾಗಿ ಆಯ್ತುಕರ ಭರವಸೆ, ಭರವಸೆಯಾಗಿ ಉಳಿಯದಿರಲಿ ಅನ್ನುವುದು ನಮ್ಮ ಆಶಯ.
ಹಾಗಂತ ಪ್ರಕರಣವನ್ನು ಇಷ್ಟಕ್ಕೆ ಬಿಡುವಂತಿಲ್ಲ. ಪ್ರಯಾಣಿಕರ ಒತ್ತಡವಿರುವ ಕಾರಣಕ್ಕೆ ಬಸ್ ನಲ್ಲಿ ಈ ರೀತಿ ಜನ ತುಂಬಿ ತುಳುಕುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಈ ಮಾರ್ಗದಲ್ಲಿ ಒಂದೆರೆಡು ಸರ್ಕಾರಿ ಬಸ್ ಗಳನ್ನು ಓಡಿಸಿದರೆ ( ಪ್ರಯಾಣಿಕರ ದಟ್ಟಣಿ ಹೆಚ್ಚಿರುವ ಸಂದರ್ಭದಲ್ಲಿ) ಈ ಸಮಸ್ಯೆ ಬಗೆ ಹರಿಯುತ್ತದೆ.
ಹೀಗಾಗಿ ಈ ಸಂಬಂಧ ಕೇವಲ ಬಸ್ ಮಾಲಕರ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ, ಜಿಲ್ಲಾಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಜೊತೆ ಚರ್ಚಿಸಿ ತಕ್ಷಣ ಕರ್ನಾಟಕ ಸಾರಿಗೆ ಬಸ್ ಗಳನ್ನು ರಸ್ತೆಗಿಳಿಸುವುದೇ ಉತ್ತಮ. ಇದರಿಂದ ಅಗಬಹುದಾದ ಅನುಕೂಲ ಒಂದೆರೆಡಲ್ಲ.
Discussion about this post